29 C
Mumbai
August 12, 2026
Mumbai News Kannada
ಮುಂಬಯಿ

ಮುಂಬೈ ಲೋಕಲ್ ರೈಲಿನಲ್ಲಿ ಬಾಗಿಲು ಮುಚ್ಚುವ ವಿವಾದ: ಚಾಕು ಇರಿತಕ್ಕೊಳಗಾಗಿದ್ದ ಯುವಕ ಸಾವು, ಆರೋಪಿ ಬಂಧನ





ಮುಂಬೈನ ಅಂಧೇರಿ ಮತ್ತು ಬೋರಿವಲಿ ನಿಲ್ದಾಣಗಳ ನಡುವೆ ಚಲಿಸುತ್ತಿದ್ದ ಲೋಕಲ್ ರೈಲಿನಲ್ಲಿ ಜೂನ್ 23 ರಂದು ರಾತ್ರಿ 10:00 ಗಂಟೆಯ ಸುಮಾರಿಗೆ ಭೀಕರ ಕೊಲೆಯೊಂದು ವರದಿಯಾಗಿದೆ. ಮುಂಬೈನಲ್ಲಿ ಮಳೆಗಾಲ ಆರಂಭದ ಮೊದಲ ದಿನವಾಗಿದ್ದರಿಂದ ಭಾರೀ ಮಳೆ ಹಾಗೂ ಬಲವಾದ ಗಾಳಿ ಬೀಸುತ್ತಿತ್ತು. ಈ ವೇಳೆ ಚರ್ಚ್‌ಗೇಟ್-ನಲಸೋಪರಾ ವೇಗದ ಲೋಕಲ್ ರೈಲಿನ ಪ್ರಥಮ ದರ್ಜೆ ಕಂಪಾರ್ಟ್‌ಮೆಂಟ್‌ನಲ್ಲಿ ಬಾಗಿಲು ಮುಚ್ಚುವ ವಿಷಯವಾಗಿ ಪ್ರಯಾಣಿಕರ ನಡುವೆ ಕ್ಷುಲ್ಲಕ ಜಗಳ ಆರಂಭವಾಗಿದೆ. ಗೋರೆಗಾಂವ್ ಮತ್ತು ಕಂಡಿವಲಿ ನಿಲ್ದಾಣಗಳ ನಡುವೆ ರೈಲು ಚಲಿಸುತ್ತಿದ್ದಾಗ ಈ ವಿವಾದ ತಾರಕಕ್ಕೇರಿದ್ದು, ಮದ್ಯದ ಅಮಲಿನಲ್ಲಿದ್ದ ದಾಳಿಕೋರನು ತಾನು ತಂದಿದ್ದ ಹರಿತವಾದ ಚಾಕುವಿನಿಂದ ಮಾಯಾಂಕ್ ರಮೇಶ್ ಲೋಹರ್ ಎಂಬ ಯುವಕನಿಗೆ ಮನಬಂದಂತೆ ಇರಿದಿದ್ದಾನೆ.
ಘಟನೆಯ ಸಮಯದಲ್ಲಿ ಇಡೀ ಕೋಚ್ ಪ್ರಯಾಣಿಕರಿಂದ ತುಂಬಿತ್ತು. ಆರೋಪಿಯು ಚಾಕು ಹಿಡಿದು ರಕ್ತದ ಮಡುವಿನಲ್ಲಿ ಬಿದ್ದಿದ್ದ ಮಾಯಾಂಕ್‌ಗೆ ಪದೇ ಪದೇ ಬೆದರಿಕೆ ಹಾಕುತ್ತಿದ್ದರೆ, ಭಯಭೀತರಾದ ಇತರೆ ಪ್ರಯಾಣಿಕರು ತಮ್ಮ ಪ್ರಾಣ ಉಳಿಸಿಕೊಳ್ಳಲು ಕೋಚ್‌ನ ಮೂಲೆಗಳಿಗೆ ಓಡಿದ್ದಾರೆ. ಈ ಇಡೀ ಘಟನೆಯ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ತೀವ್ರವಾಗಿ ವೈರಲ್ ಆಗಿದೆ. ರೈಲು ಬೋರಿವಲಿ ನಿಲ್ದಾಣವನ್ನು ತಲುಪುತ್ತಿದ್ದಂತೆ, ಅದು ಸಂಪೂರ್ಣವಾಗಿ ನಿಲ್ಲುವ ಮೊದಲೇ ವೇಗ ಕಡಿಮೆಯಾದ ತಕ್ಷಣ ದಾಳಿಕೋರನು ರೈಲಿನಿಂದ ಕೆಳಕ್ಕೆ ಹಾರಿ ಪರಾರಿಯಾಗಿದ್ದಾನೆ. ಆತ ನಿಲ್ದಾಣದ ಆವರಣದಿಂದ ಹೊರಹೋಗುತ್ತಿರುವ ದೃಶ್ಯಾವಳಿಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ.
ರೈಲು ನಿಲ್ದಾಣಕ್ಕೆ ಬರುತ್ತಿದ್ದಂತೆ ಪ್ರಯಾಣಿಕರು ಅಲ್ಲಿ ನಿಯೋಜನೆಗೊಂಡಿದ್ದ ಪೊಲೀಸರಿಗೆ ತಕ್ಷಣ ಮಾಹಿತಿ ನೀಡಿದ್ದಾರೆ. ರೈಲ್ವೆ ಪೊಲೀಸರು ತಕ್ಷಣವೇ ಗಾಯಗೊಂಡಿದ್ದ ಮಾಯಾಂಕ್ ಅವರನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ದರಾದರೂ, ಅತಿಯಾದ ರಕ್ತಸ್ರಾವದ ಕಾರಣ ಅವರು ಆಸ್ಪತ್ರೆ ತಲುಪುವ ಮೊದಲೇ ಮಾರ್ಗಮಧ್ಯದಲ್ಲೇ ಮೃತಪಟ್ಟಿದ್ದಾರೆ ಎಂದು ಬೊರಿವಲಿ ರೈಲ್ವೆ ಪೊಲೀಸ್ ಠಾಣೆಯ ಹಿರಿಯ ಪೊಲೀಸ್ ಇನ್ಸ್‌ಪೆಕ್ಟರ್ ದತ್ತ ಖುಪ್ರೇಕರ್ ತಿಳಿಸಿದ್ದಾರೆ.
ಇಂದು (ಜೂ. 25) ತಡ ಸಂಜೆ ಮಾರಣಾಂತಿಕ ಇರಿತದ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈ ರೈಲ್ವೆ ಪೊಲೀಸರು ಮೀರಾ ರೋಡ್ ನಿವಾಸಿಯಾದ 30 ವರ್ಷದ ವ್ಯಕ್ತಿಯನ್ನು ಬುಧವಾರ ಬಂಧಿಸಿದ್ದಾರೆ.
​ ಬಂಧಿತ ಆರೋಪಿಯನ್ನು ಮುಂಬೈ ವಿಮಾನ ನಿಲ್ದಾಣದ ಕಾರ್ಗೋ ವಿಭಾಗದಲ್ಲಿ ಕೆಲಸ ಮಾಡುವ ಮೀರಾ ರೋಡ್ ನಿವಾಸಿ ರೋಶನ್ ಸುವರ್ಣ (30) ಎಂದು ಗುರುತಿಸಲಾಗಿದೆ.

ಈ ಘಟನೆಯು ಮುಂಬೈ ಲೋಕಲ್ ರೈಲುಗಳಲ್ಲಿ ಪ್ರಯಾಣಿಕರ ಸುರಕ್ಷತೆಯ ಬಗ್ಗೆ ಮತ್ತೆ ಹಲವು ಗಂಭೀರ ಪ್ರಶ್ನೆಗಳನ್ನು ಮೂಡಿಸಿದೆ. ಪಶ್ಚಿಮ ರೈಲ್ವೆ ಜಾಲದಲ್ಲಿ ಈ ವರ್ಷ ನಡೆದ ಎರಡನೇ ಕೊಲೆ ಪ್ರಕರಣ ಇದಾಗಿದೆ. ಇದಕ್ಕೂ ಮುನ್ನ ಜೂನ್ ತಿಂಗಳ ಆರಂಭದಲ್ಲಿ ಮಲಾಡ್ ನಿಲ್ದಾಣದಲ್ಲಿ ಸ್ಥಳೀಯ ರೈಲಿನಿಂದ ಇಳಿಯುವಾಗ ನಡೆದ ಇಂತಹುದೇ ವಾಗ್ವಾದದಲ್ಲಿ ಪ್ರೊಫೆಸರ್ ಅಲೋಕ್‌ಕುಮಾರ್ ಸಿಂಗ್ ಎಂಬುವವರನ್ನು ಹರಿತವಾದ ಆಯುಧದಿಂದ ಇರಿದು ಕೊಲ್ಲಲಾಗಿತ್ತು. ಆ ಪ್ರಕರಣದಲ್ಲಿ ರೈಲ್ವೆ ಪೊಲೀಸರು ಕೆಲವೇ ಗಂಟೆಗಳಲ್ಲಿ ಆರೋಪಿ ಓಂಕಾರ್ ಶಿಂಧೆ ಎಂಬಾತನನ್ನು ಬಂಧಿಸಿದ್ದರು. ಸದ್ಯದ ಈ ಘಟನೆಯು ಮುಂಬೈನ ದೈನಂದಿನ ರೈಲು ಪ್ರಯಾಣಿಕರಲ್ಲಿ ತೀವ್ರ ಆತಂಕವನ್ನು ಸೃಷ್ಟಿಸಿದೆ.



Related posts

ಮಹಾರಾಷ್ಟ್ರದಲ್ಲಿ 33 ಮಹೇಶ್ ಟ್ಯುಟೋರಿಯಲ್ಸ್ ಕೇಂದ್ರಗಳು ದಿಢೀರ್ ಬಂದ್: 2,500 ವಿದ್ಯಾರ್ಥಿಗಳ ಭವಿಷ್ಯ ಆತಂಕದಲ್ಲಿ

Mumbai News Desk

ಶ್ರೀ ಬ್ರಹ್ಮಲಿಂಗೇಶ್ವರ ಅಬ್ಬಗದಾರಗ ಆಲಡೆ ಹೆಜಮಾಡಿ : ಸಿರಿ -ನುಡಿ ವಿಶೇಷ ಉಪನ್ಯಾಸ ಹಾಗೂ ಜೀರ್ಣೋದ್ಧಾರ ಕಾರ್ಯದ ಪ್ರಗತಿ ಪರಿಶೀಲನಾ ಸಭೆ

Mumbai News Desk

ಮುಂಬೈ: ಭಾಯಂದರ್ ಪೂರ್ವದಲ್ಲಿ ಕಟ್ಟಡಕ್ಕೆ ನುಗ್ಗಿದ ದೊಡ್ಡ ಬೆಕ್ಕು(ಚಿರತೆ), 3 ಜನರಿಗೆ ಗಾಯ

Mumbai News Desk

ಬೋರಿವಲಿ ತುಳು ಸಂಘದ 16ನೇ ವಾರ್ಷಿಕೋತ್ಸವ.

Mumbai News Desk

ವಸಾಯಿ ಕರ್ನಾಟಕ ಸಂಘ ಮಹಿಳಾ ವಿಭಾಗದ ನವರಾತ್ರಿ ಉತ್ಸವ: ಸಂಸ್ಕೃತಿ ಮತ್ತು ಸಾಧನೆಗಳ ಸಮಾಗಮ

Mumbai News Desk

ಪಶ್ಚಿಮ ವಿಭಾಗ ಸಾರ್ವಜನಿಕ ನವರಾತ್ರೋತ್ಸವ ಮಂಡಳಿ ದಿವ್ಯ ಮೂರ್ತಿಯ ವಿಸರ್ಜನಾ ಮೆರವಣಿಗೆ

Mumbai News Desk