
ಚಿತ್ರ-ವರದಿ: ಉಮೇಶ್ ಕೆ. ಅಂಚನ್
ಭಾಯಂದರ್ (ಅ. 11): ಇಲ್ಲಿನ ಅಯ್ಯಪ್ಪ ಆರಾಧನಾ ಭಕ್ತ ಮಂಡಳಿಯ ಸಹಸಂಸ್ಥೆಯಾದ ‘ಆರಾಧನಾ ಫ್ರೆಂಡ್ಸ್’ ವತಿಯಿಂದ ಇತ್ತೀಚೆಗೆ (ಅ. 9, ಭಾನುವಾರ) ಮಂದಿರದ ವಠಾರದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ‘ಆಟಿದ ನೆನಪು’ ಕಾರ್ಯಕ್ರಮವನ್ನು ವಿಜ್ರಂಭಣೆಯಿಂದ ಆಯೋಜಿಸಲಾಗಿತ್ತು.
ಆರಂಭದಲ್ಲಿ ಅಯ್ಯಪ್ಪ ಆರಾಧನಾದ ಗುರುಸ್ವಾಮಿ ಸುಧಾಕರ್ ಪೂಜಾರಿಯವರು ಮಂದಿರದಲ್ಲಿ ವಿಶೇಷ ಪೂಜೆ ಸಲ್ಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಪೂಜಾರಿಯವರು, “ಹಿಂದಿನ ಕಾಲದಲ್ಲಿ ಆಟಿ (ಆಷಾಢ) ತಿಂಗಳಿನಲ್ಲಿ ಸುರಿಯುತ್ತಿದ್ದ ಭಾರೀ ಮಳೆಯಿಂದಾಗಿ ಯಾವುದೇ ಕೆಲಸ-ಕಾರ್ಯಗಳನ್ನು ಮಾಡಲು ಸಾಧ್ಯವಾಗದೆ ನಮ್ಮ ಪೂರ್ವಜರು ಕಷ್ಟದ ಜೀವನ ಸಾಗಿಸುತ್ತಿದ್ದರು. ಮಳೆಗಾಲದಲ್ಲಿ ಸಹಜವಾಗಿ ಸಿಗುತ್ತಿದ್ದ ಸೊಪ್ಪು ಹಾಗೂ ತರಕಾರಿಗಳನ್ನು ಬಳಸಿಕೊಂಡು ದಿನ ದೂಡುತ್ತಿದ್ದರು. ಆದರೆ ಇಂದಿನ ಬದಲಾದ ಕಾಲಘಟ್ಟದಲ್ಲಿ, ಅಂದು ಸವಿಯುತ್ತಿದ್ದ ಸಾಂಪ್ರದಾಯಿಕ ತಿಂಡಿ-ತಿನಿಸುಗಳನ್ನು ನೆನಪಿಸಿಕೊಳ್ಳುವ ಮೂಲಕ ಆಟಿಯ ಸಂಪ್ರದಾಯವನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ” ಎಂದು ಹೇಳಿದರು.
ಆರಾಧನಾ ಫ್ರೆಂಡ್ಸ್ನ ಕಾರ್ಯಾಧ್ಯಕ್ಷೆ ಪ್ರೇಮಾ ಮಾಧವ ಹೆಗ್ಡೆಯವರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ ಎಲ್ಲಾ ಸದಸ್ಯರಿಗೆ ಕೃತಜ್ಞತೆ ಸಲ್ಲಿಸಿ, ಮುಂದೆಯೂ ಎಲ್ಲರ ಸಹಕಾರ ಹೀಗೆಯೇ ಇರಲೆಂದು ಆಶಿಸಿದರು.
ಕಾರ್ಯಕ್ರಮದ ಭಾಗವಾಗಿ ಆಟಿ ತಿಂಗಳಲ್ಲಿ ದೊರೆಯುವ ವಿವಿಧ ಬಗೆಯ ಖಾದ್ಯ ಹಾಗೂ ಸಾಂಪ್ರದಾಯಿಕ ತಿನಿಸುಗಳ ಊಟೋಪಚಾರ ನೆರವೇರಿತು.
ಈ ಸಂದರ್ಭದಲ್ಲಿ ಮಂಡಳಿಯ ಪದಾಧಿಕಾರಿಗಳು ಹಾಗೂ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದು ಸಹಕರಿಸಿದರು. ಕೊನೆಯಲ್ಲಿ ವನಿತಾ ಹೆಗ್ಡೆ ಧನ್ಯವಾದ ಸಮರ್ಪಿಸಿದರು.




