ರಾಷ್ಟ್ರೀಯ ಮಹಾಮಾರ್ಗಗಳ ‘ರಸ್ತೆಯ ಹಕ್ಕು’ (ರೈಟ್ ಆಫ್ ವೇ – ROW) ವ್ಯಾಪ್ತಿಯಲ್ಲಿ ಬರುವ ಎಲ್ಲಾ ಅನಧಿಕೃತ ಮತ್ತು ಪರವಾನಗಿ ಇಲ್ಲದ ಧಾಬಾ, ಹೋಟೆಲ್ ಹಾಗೂ ವಾಣಿಜ್ಯ ನಿರ್ಮಾಣಗಳನ್ನು ಮುಂಬರುವ ,60 ದಿನಗಳ ಒಳಗೆ ತೆರವುಗೊಳಿಸಿ, ನೆಲಸಮ ಮಾಡುವಂತೆ ಮಹಾರಾಷ್ಟ್ರ ಸರ್ಕಾರ ರಾಜ್ಯದ ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳಿಗೆ ಕಟ್ಟುನಿಟ್ಟಿನ ಆದೇಶ ನೀಡಿದೆ. ಸುಪ್ರೀಂ ಕೋರ್ಟ್ ನೀಡಿದ ನಿರ್ದೇಶನದ ಮೇರೆಗೆ ಈ ಕ್ರಮ ಕೈಗೊಳ್ಳಲಾಗುತ್ತಿದ್ದು, ರಾಷ್ಟ್ರೀಯ ಮಹಾಮಾರ್ಗಗಳ ಕಾಯ್ದಿರಿಸಿದ ಜಾಗದಲ್ಲಿ ಹೊಸದಾಗಿ ಯಾವುದೇ ಧಾಬಾ ಅಥವಾ ವಾಣಿಜ್ಯ ಸಂಕೀರ್ಣಗಳನ್ನು ನಿರ್ಮಿಸುವುದನ್ನು ತಕ್ಷಣದಿಂದ ಜಾರಿಗೆ ಬರುವಂತೆ ನಿಷೇಧಿಸಲಾಗಿದೆ.
ರಾಜಸ್ಥಾನದ ಫಲೌದಿ ಎಂಬಲ್ಲಿ ರಸ್ತೆಬದಿಯ ಧಾಬಾ ಮುಂದೆ ನಿಲ್ಲಿಸಲಾಗಿದ್ದ ಟ್ರಕ್ಗೆ ವಾಹನವೊಂದು ಡಿಕ್ಕಿಯಾಗಿ 15 ಜನರು ಮೃತಪಟ್ಟ ಘಟನೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು ಈ ಮಹತ್ವದ ನಿರ್ದೇಶನ ನೀಡಿದೆ. ಸುಪ್ರೀಂ ಕೋರ್ಟ್ ಆದೇಶದಂತೆ ಮಹಾಮಾರ್ಗದ ಸುರಕ್ಷಿತ ವಲಯಗಳಲ್ಲಿ NHAI ಅಥವಾ PWD ಅನುಮತಿ ಇಲ್ಲದೆ ಯಾವುದೇ ಹೊಸ ವ್ಯಾಪಾರ ಪರವಾನಗಿ ಅಥವಾ ನಿರಾಕ್ಷೇಪಣಾ ಪತ್ರ (NOC) ನೀಡಬಾರದು ಹಾಗೂ ಈಗಾಗಲೇ ನೀಡಲಾಗಿರುವ ಪರವಾನಗಿಗಳನ್ನು ೩೦ ದಿನಗಳಲ್ಲಿ ಪರಿಶೀಲಿಸಬೇಕು ಎಂದು ತಿಳಿಸಲಾಗಿದೆ. ಜೊತೆಗೆ, ಮಹಾಮಾರ್ಗದ ಮಧ್ಯಭಾಗದಿಂದ ವಸತಿ ಉದ್ದೇಶಕ್ಕೆ 40 ಮೀಟರ್ ಮತ್ತು ವಾಣಿಜ್ಯ ಉದ್ದೇಶಕ್ಕೆ 72 ಮೀಟರ್ ವ್ಯಾಪ್ತಿಯಲ್ಲಿ ಭೂ ಬಳಕೆಯ ಬದಲಾವಣೆಯನ್ನು ನಿಷೇಧಿಸಲು ನಿರ್ದೇಶಿಸಲಾಗಿದೆ. ಈ ಕಾನೂನು ಜಾರಿಗಾಗಿ ಪ್ರತಿ ಜಿಲ್ಲೆಯಲ್ಲೂ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ‘ಜಿಲ್ಲಾ ಮಹಾಮಾರ್ಗ ಸುರಕ್ಷತಾ ಪಡೆ’ ರಚಿಸಲಾಗುತ್ತಿದ್ದು, ಅತಿಕ್ರಮಣ ತೆರವುಗೊಳಿಸುವ ಸಂಪೂರ್ಣ ಜವಾಬ್ದಾರಿಯನ್ನು ಜಿಲ್ಲಾಧಿಕಾರಿಗಳು ಮತ್ತು ಪೊಲೀಸ್ ಅಧಿಕಾರಿಗಳಿಗೆ ವಹಿಸಲಾಗಿದೆ.




