28.7 C
Mumbai
June 30, 2026
Mumbai News Kannada
ನೆರವು

ಉದ್ಧವ್ ಸೇನೆಗೆ ಬಿಗ್ ಶಾಕ್: ಆದಿತ್ಯ ಠಾಕ್ರೆ ಆಪ್ತ ಸಚಿನ್ ಅಹಿರ್ ಶಿಂಧೆ ಬಣಕ್ಕೆ ಸೇರ್ಪಡೆ





ಮಹಾರಾಷ್ಟ್ರ ರಾಜಕೀಯದಲ್ಲಿ ಶಿವಸೇನೆ (ಯುಬಿಟಿ) ಮುಖ್ಯಸ್ಥ ಉದ್ಧವ್ ಠಾಕ್ರೆ ಪಾಳಯಕ್ಕೆ ಮತ್ತೊಂದು ಭಾರಿ ಹಿನ್ನಡೆಯಾಗಿದ್ದು, ಯುವ ನಾಯಕ ಆದಿತ್ಯ ಠಾಕ್ರೆ ಅವರ ಅತ್ಯಂತ ಆಪ್ತ ಹಾಗೂ ಪಕ್ಷದ ಪ್ರಮುಖ ನಾಯಕ ಸಚಿನ್ ಅಹಿರ್ ಅವರು ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆಗೆ ಸೇರ್ಪಡೆಯಾಗಿದ್ದಾರೆ. ಪಕ್ಷ ಬದಲಿಸಿದ ಬೆನ್ನಲ್ಲೇ ಮಹಾರಾಷ್ಟ್ರ ವಿಧಾನ ಪರಿಷತ್ತಿನ ಉಪಾಧ್ಯಕ್ಷ ಸ್ಥಾನಕ್ಕೆ ಆಡಳಿತಾರೂಢ ಮಹಾಯುತಿ ಮೈತ್ರಿಕೂಟದ ಅಧಿಕೃತ ಅಭ್ಯರ್ಥಿಯಾಗಿ ಅಹಿರ್ ಮಂಗಳವಾರ ನಾಮಪತ್ರ ಸಲ್ಲಿಸಿದ್ದಾರೆ. ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ, ಮತ್ತು ಸುನೇತ್ರಾ ಪವಾರ್ ಅವರ ಸಮ್ಮುಖದಲ್ಲಿ ಈ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ನಡೆದಿದ್ದು, ಬುಧವಾರದಂದು ಈ ಸ್ಥಾನಕ್ಕೆ ಚುನಾವಣೆ ನಡೆಯಲಿದೆ.
ಇತ್ತೀಚೆಗಷ್ಟೇ ಉದ್ಧವ್ ಠಾಕ್ರೆ ಬಣದ ಆರು ಲೋಕಸಭಾ ಸಂಸದರು ಆಡಳಿತಾರೂಢ ಶಿಂಧೆ ನೇತೃತ್ವದ ಶಿವಸೇನೆಗೆ ಸೇರ್ಪಡೆಯಾಗಿ ಆಘಾತ ನೀಡಿದ್ದರು. ಆ ರಾಜಕೀಯ ಸಂಚಲನ ಮಾಸುವ ಮುನ್ನವೇ ಸಚಿನ್ ಅಹಿರ್ ಅವರಂತಹ ಪ್ರಭಾವಿ ನಾಯಕ ಪಕ್ಷ ತೊರೆದಿರುವುದು ಉದ್ಧವ್ ಪಾಳಯವನ್ನು ಮತ್ತಷ್ಟು ಸಂಕಷ್ಟಕ್ಕೆ ದೂಡಿದೆ. ಮಾಜಿ ಸಚಿವರೂ ಆಗಿರುವ ಅಹಿರ್, ವರ್ಲಿ ವಿಧಾನಸಭಾ ಕ್ಷೇತ್ರದಲ್ಲಿ ಆದಿತ್ಯ ಠಾಕ್ರೆ ಅವರ ರಾಜಕೀಯ ನೆಲೆಯನ್ನು ಭದ್ರಪಡಿಸುವಲ್ಲಿ ಮತ್ತು ಮತದಾರರನ್ನು ಕ್ರೋಢೀಕರಿಸುವಲ್ಲಿ ಅತ್ಯಂತ ಪ್ರಮುಖ ಪಾತ್ರ ವಹಿಸಿದ್ದರು. 2019 ರಲ್ಲಿ ಎನ್‌ಸಿಪಿ ತೊರೆದು ಅವಿಭಜಿತ ಶಿವಸೇನೆ ಸೇರಿದ್ದ ಅವರಿಗೆ 2022 ರಲ್ಲಿ ಎಂಎಲ್‌ಸಿ ಹುದ್ದೆ ನೀಡಲಾಗಿತ್ತು. ಆಡಳಿತ ಪಕ್ಷದ ನಾಯಕರು ಈ ಸರಣಿ ಪಕ್ಷಾಂತರವನ್ನು ‘ಆಪರೇಷನ್ ಟೈಗರ್’ ಎಂದು ಬಣ್ಣಿಸಿದ್ದಾರೆ. ಈ ಮಧ್ಯೆ, ಶಿವಸೇನೆ (ಯುಬಿಟಿ) ನಾಯಕರ ಸರಣಿ ನಿರ್ಗಮನಕ್ಕೆ ಉದ್ಧವ್ ಠಾಕ್ರೆ ಮತ್ತು ಸಂಜಯ್ ರಾವತ್ ಅವರ ದುರಹಂಕಾರದ ನಡವಳಿಕೆಯೇ ಕಾರಣ ಎಂದು ಬಿಜೆಪಿ ವಾಗ್ದಾಳಿ ನಡೆಸಿದೆ.



Related posts

ಹೃದಯ ಚಿಕಿತ್ಸೆಗೆ ಬಡ ಕುಟುಂಬದ ಆಕ್ರಂದನ: ನೆರವಿಗಾಗಿ ಯಾಚನೆ

Mumbai News Desk

ರಂಗ ನಿರ್ದೇಶಕ, ನಾಟಕಕಾರ ಪರಮಾನಂದ ಸಾಲ್ಯಾನ್‌ಗೆ ಆರ್ಥಿಕ ಸಹಾಯದ ಅಗತ್ಯ

Mumbai News Desk