
ಮುಂಬೈಯ ಹಿರಿಯ ಧಾರ್ಮಿಕ ಸಂಘಟನೆಯಾದ ಶ್ರೀ ಮದ್ಭಾರತ ಮಂಡಳಿಯು 148ವರ್ಷಗಳಿಂದ ನಡೆಸಿಕೊಂಡು ಬಂದಿರುತ್ತದೆ. ಅಂತೆಯೇ ಈ ವರ್ಷ 149ನೇ ಪುಣ್ಯ ಗ್ರಂಥ ಪಾರಾಯಣ ಕಾರ್ಯಕ್ರಮವು ಶನಿವಾರ ಜೂನ್ 20ರಂದು ಸಂಜೆ 5 30ಕ್ಕೆ ಮಂಡಳಿಯ ಅಂಧೇರಿ ಪಶ್ಚಿಮದ ವೀರಾ ದೇಸಾಯಿ ರಸ್ತೆಯ ಸಮೀಪದ ಎಂ ವಿ ಎಂ ಎಜುಕೇಶನಲ್ ಮಾರ್ಗದಲ್ಲಿರುವ ಶ್ರೀ ಲಕ್ಷ್ಮೀ ನಾರಾಯಣ ಮಂದಿರದಲ್ಲಿ ಪರಂಪರೆಯಂತೆ ಪ್ರಾರಂಭವಾಯಿತು. ಈ ವರ್ಷ ಗ್ರಂಥ ವಾಚನಕ್ಕೆ ಲಕ್ಷ್ಮೀಶ ಕವಿ ವಿರಚಿತ “ಜೈಮಿನಿ ಭಾರತ ” ಎಂಬ ಪುಣ್ಯ ಗ್ರಂಥವನ್ನು ಆಯ್ಕೆ ಮಾಡಲಾಗಿದೆ. ಗ್ರಂಥ ವಾಚನಕ್ಕೆ ಶ್ಯಾಮ್ ಕೆ. ಪುತ್ರನ್,ಅರ್ಥ ವಿವರಣೆಗೆ ಶ್ರೀಮತಿ ಪುಷ್ಪಾ ಜಿ. ಬಂಗೇರ,ಅರ್ಚಕ ಭಟ್ಟರಾಗಿ ವಾಸು ಎಸ್. ಉಪ್ಪುರು ,ಚಾಮರ ಸೇವೆಗೆ ಹೊಸಬೆಟ್ಟು ಎಚ್. ಮಹಾಬಲ ಮತ್ತು ಮುಳೂರು ಹರಿಶ್ಚಂದ್ರ ಕೆ.ಕಾಂಚನ್, ಜನಮೇಜಯ ಪೀಠದಲ್ಲಿ ಕುಳೂರು ನಾಗೇಶ್ ಎಲ್. ಮೆಂಡನ್,ಪೂಜಾ ಮೇಲ್ವಿಚಾರಕರಾಗಿ ಅಳಿಕೆ ಪುರಂದರ ಅಮೀನ್ ಅವರು ಮಂಡಳಿಯ ವಾಡಿಕೆಯಂತೆ ಧೀಕ್ಷೆ ಪಡೆದರು.ಜೂನ್ 20ರಂದು ಪಾರಾಯಣ ಪ್ರಾರಂಭವಾದ ನಂತರ ಪ್ರತಿ ಶನಿವಾರ ಸಂಜೆ 5.30ರಿಂದ 7ರ ವರೆಗೆ ನಡೆಯಲಿದೆ.ಗ್ರಂಥ ವಾಚನದ ನಂತರ ಭಜನೆ, ಮಹಾ ಆರತಿ, ಪ್ರಸಾದ ವಿತರಣೆ ಜರಗಲಿದೆ.ಈ ಗ್ರಂಥ ವಾಚನವು 2027ರ ಫೆಬ್ರವರಿ ವರೆಗೆ ನಿರಂತರ ಜರಗಲಿದೆ. ಪಾರಾಯಣ ದ ಪೂರ್ವಭಾವಿಯಾಗಿ ಮಂಡಳಿಯ ಶ್ರೀ ಲಕ್ಷ್ಮಿ ನಾರಾಯಣ ದೇವಸ್ಥಾನ ದ ಪ್ರಧಾನ ಅರ್ಚಕರಾದ ಗುರು ಪ್ರಸಾದ್ ಭಟ್ ಅವರಿಂದ ಗಣ ಹೋಮ ಹಾಗೂ ಪರಂಪರೆಯ ವಿಧಿ ವಿಧಾನಗಳು ನಡೆಯಿತು. ಬಳಿಕ ವಾಡಿಕೆಯಂತೆ ದೇವರ ಬಂಗಾರದ ಉತ್ಸವ ಮೂರ್ತಿಗೆ ಅಲಂಕಾರ ಪ್ರಕ್ರಿಯೆ ನಡೆಯಿತು. ಈ ಸಂದರ್ಭದಲ್ಲಿ ದೇವರಿಗೆ ಸೇವಾರೂಪದಲ್ಲಿ ಅರ್ಪಿಸಲಾಗಿದ್ದ ಆಭರಣ ಗಳನ್ನು ದಾನಿಗಳು ಮತ್ತು ಪ್ರತಿನಿಧಿಗಳು ದೇವರ ಮೂರ್ತಿಗೆ ಅರ್ಪಿಸಿದರು.ಈ ಪಾರಾಯಣ ದಲ್ಲಿ ತುಳು ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶ್ರೀ ಲಕ್ಷ್ಮಿ ನಾರಾಯಣ ದೇವರ ಕ್ರಪೆಗೆ ಪಾತ್ರರಾಗಬೇಕೆಂದು ಮಂಡಳಿಯ ಅಧ್ಯಕ್ಷರಾದ ಜಗನ್ನಾಥ ಪಿ. ಪುತ್ರನ್, ಪ್ರಧಾನ ಕಾರ್ಯದರ್ಶಿ ಹರಿಶ್ಚಂದ್ರ ಸಿ. ಕಾಂಚನ್ ವಿನಂತಿ ಮಾಡಿದರು. ಈ ಕಾರ್ಯಕ್ರಮದಲ್ಲಿ ಮಂಡಳಿ ಯ ಟ್ರಸ್ಟಿ ಗೋವಿಂದ ಎನ್. ಪುತ್ರನ್ ಮತ್ತು ಮೋಹನ್ ದಾಸ್ ಓಡಿ ಮೆಂಡನ್, ಉಪಾಧ್ಯಕ್ಷರಾದ ನಾಗೇಶ್ ಮೆಂಡನ್ ಮತ್ತು ಲೋಕನಾಥ್ ಪಿ. ಕಾಂಚನ್, ಜತೆ ಕಾರ್ಯದರ್ಶಿ ಗಳಾದ ಸುರೇಂದ್ರ ಶ್ಯಾಮ್ ಕೆ. ಪುತ್ರನ್,ಪ್ರಧಾನ ಕೋಶಾಧಿಕಾರಿ ಕೇಶವ್ ಆರ್. ಪುತ್ರನ್, ಜತೆ ಕೋಶಾಧಿಕಾರಿ ಗಳಾದ ಜಗನ್ನಾಥ ಆರ್. ಕಾಂಚನ್ ಸಮಿತಿ ಸದಸ್ಯರಾದ ರತ್ನಾಕರ್ ಬಂಗೇರ, ಕುಮಾರ್ ಮೆಂಡನ್ ಹಾಗೂ ಮಹಿಳಾ ಸಮಿತಿ ಯ ಸದಸ್ಯರು ಉಪಸ್ಥಿತರಿದ್ದರು.





