September 6, 2026
Mumbai News Kannada
ಸುದ್ದಿ

ವಿದ್ಯಾರ್ಥಿಗಳ ಹೆಸರಿನಲ್ಲಿ ಅರಾಜಕತೆ: ಆರ್ ಎ ಎಫ್, ಪೊಲೀಸರ ಮೇಲಿನ ದಾಳಿ ಖಂಡನೀಯ: ಬಿಜೆಪಿ ಮುಖಂಡ ಶ್ರೀನಿಧಿ ಹೆಗ್ಡೆ





ಉಡುಪಿ: ನೀಟ್ ಪರೀಕ್ಷೆ ಸಂಬಂಧಿಸಿ ದೆಹಲಿಯ ಜಂತರ್ ಮಂತರ್ ನಲ್ಲಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಭದ್ರತಾ ಸಿಬ್ಬಂದಿಯನ್ನು ನೆಲಕ್ಕುರುಳಿಸಿ ಗುಂಪಾಗಿ ಹಲ್ಲೆ ನಡೆಸುವ ದೃಶ್ಯಗಳು ಹೊರಬರುತ್ತಿವೆ. ಇಂಥ ಹಿಂಸಾತ್ಮಕ ಚಟುವಟಿಕೆಗಳು ಪ್ರಜಾಪ್ರಭುತ್ವದ ಮೌಲ್ಯಗಳಿಗೆ ಹೊಂದಿಕೆಯಾಗುವುದಿಲ್ಲ. ಶಾಂತಿಯುತ ಪ್ರತಿಭಟನೆಯ ಸೋಗಿನಲ್ಲಿ ಆರ್ ಎ ಎಫ್ ಮತ್ತು ಪೊಲೀಸ್ ಸಿಬ್ಬಂದಿಗಳ ಮೇಲೆ ಹಲ್ಲೆ ನಡೆಸಿರುವುದು ಖಂಡನೀಯ ಎಂದು ಬಿಜೆಪಿ ಉಡುಪಿ ಜಿಲ್ಲಾ ಕಾರ್ಯದರ್ಶಿ ಶ್ರೀನಿಧಿ ಹೆಗ್ಡೆ ಹಿರೇಬೆಟ್ಟು ಹೇಳಿದ್ದಾರೆ.

ನೀಟ್ ಪರೀಕ್ಷೆ ವಿಷಯದಲ್ಲಿ ವಿದ್ಯಾರ್ಥಿಗಳು,ಪೋಷಕರು ಹಾಗೂ ವಿವಿಧ ಸಂಘಟನೆಗಳಿಂದ ಪ್ರತಿಭಟನೆಗಳು ನಡೆಯುತ್ತಿವೆ. ಪರೀಕ್ಷಾ ವ್ಯವಸ್ಥೆಯಲ್ಲಿ ಪಾರದರ್ಶಕತೆ, ನ್ಯಾಯ ಮತ್ತು ಉತ್ತರದಾಯಿತ್ವಕ್ಕಾಗಿ ಆಗ್ರಹಿಸುವುದು ಪ್ರಜಾಪ್ರಭುತ್ವದಲ್ಲಿ ಸಂವಿಧಾನಬದ್ಧ ಹಕ್ಕು. ಶಾಂತಿಯುತವಾಗಿ ನಡೆಯುವ ಪ್ರತಿಭಟನೆಗೆ ಯಾರೂ ವಿರೋಧ ವ್ಯಕ್ತಪಡಿಸುವುದಿಲ್ಲ. ಆದರೆ ಕಾನೂನಿಗೆ ಗೌರವ ನೀಡುವುದು, ಸಾರ್ವಜನಿಕ ಸುವ್ಯವಸ್ಥೆ ಕಾಪಾಡುವುದು ಹಾಗೂ ಸಮಾಜದಲ್ಲಿ ಶಾಂತಿ ನೆಲೆಸುವಂತೆ ನೋಡಿಕೊಳ್ಳುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯ. ಇಂತಹ ಸಂದರ್ಭದಲ್ಲಿ ಭದ್ರತಾ ಸಿಬ್ಬಂದಿಗಳ ಮೇಲೆ ಹಲ್ಲೆ ನಡೆಸಿರುವುದು ಖಂಡನೀಯ ಎಂದು ಅವರು ತಿಳಿಸಿದ್ದಾರೆ.

ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣ ಬೆಳಕಿಗೆ ಬಂದ ತಕ್ಷಣ ಕೇಂದ್ರ ಸರ್ಕಾರ ತನಿಖೆಗೆ ಆದ್ಯತೆ ನೀಡಿದೆ.ಕೇಂದ್ರದ ಎನ್‌ಡಿಎ ಸರ್ಕಾರವು ನೀಟ್ ಪರೀಕ್ಷಾ ಅಕ್ರಮಗಳ ವಿರುದ್ಧ ಶೂನ್ಯ-ಸಹಿಷ್ಣುತೆಯ ನಿಲುವಿನೊಂದಿಗೆ ಕಠಿಣ ಕ್ರಮ ಕೈಗೊಂಡಿದ್ದು, ಪ್ರಕರಣವನ್ನು ತಕ್ಷಣ ಸಿಬಿಐ ತನಿಖೆಗೆ ವಹಿಸಿ ದೇಶಾದ್ಯಂತ ೪೯+ ಸ್ಥಳಗಳಲ್ಲಿ ದಾಳಿ ನಡೆಸಿ ೧೩+ ಪ್ರಮುಖ ಆರೋಪಿಗಳನ್ನು ಬಂಧಿಸಿದೆ. ಭವಿಷ್ಯದಲ್ಲಿ ಇಂತಹ ಅಕ್ರಮಗಳನ್ನು ತಡೆಯಲು ಭೌತಿಕ ಪೇಪರ್ ಪದ್ಧತಿಯನ್ನು ರದ್ದುಗೊಳಿಸಿ ಸುರಕ್ಷಿತ ಕಂಪ್ಯೂಟರ್ ಆಧಾರಿತ (CBT) ಪರೀಕ್ಷಾ ವ್ಯವಸ್ಥೆ ಜಾರಿಗೆ ತರುವ ಐತಿಹಾಸಿಕ ನಿರ್ಧಾರ ಕೈಗೊಂಡಿದೆ. ಇಷ್ಟೆಲ್ಲಾ ಕ್ರಮಗಳಿದ್ದರೂ, ಜಂತರ್ ಮಂತರ್ ಹಾಗೂ ‘ಸಂಸದ್ ಚಲೋ’ ಹೆಸರಿನಲ್ಲಿ ನಡೆಯುತ್ತಿರುವ ಪ್ರತಿಭಟನೆಗಳು ರಾಜಕೀಯ ಪ್ರೇರಿತವಾಗಿದ್ದು, ಸಾರ್ವಜನಿಕ ಶಾಂತಿ ಮತ್ತು ದೈನಂದಿನ ಜೀವನಕ್ಕೆ ತೀವ್ರ ಧಕ್ಕೆ ಉಂಟುಮಾಡುತ್ತಿವೆ. ಭಾರಿ ಟ್ರಾಫಿಕ್ ಜಾಮ್ ಉಂಟುಮಾಡಿ ಆಂಬ್ಯುಲೆನ್ಸ್, ಶಾಲಾ ಮಕ್ಕಳು ಮತ್ತು ಉದ್ಯೋಗಿಗಳ ಸಂಚಾರಕ್ಕೆ ಅಡ್ಡಿಯಾಗಿರುವುದು ಖಂಡನೀಯವಾಗಿದ್ದು, ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿ ಮಾಡುತ್ತಿರುವುದು ನಾಗರಿಕ ಸಮಾಜ ತಲೆತಗ್ಗಿಸುವಂತಹ ಸಂಗತಿಯಾಗಿದೆ ಎಂದು ಹೆಗ್ಡೆಯವರು ಟೀಕಿಸಿದ್ದಾರೆ.

ಪ್ರತಿಕೂಲ ಪರಿಸ್ಥಿತಿಗಳಲ್ಲೂ ಕರ್ತವ್ಯ ನಿರ್ವಹಿಸುತ್ತಿರುವ RAF ಮತ್ತು ದೆಹಲಿ ಪೊಲೀಸ್ ಸಿಬ್ಬಂದಿಗಳ ಮೇಲೆ ಕಲ್ಲು ತೂರಾಟ ನಡೆಸಿ ಹಿಂಸಾಚಾರ ಎಸಗಿರುವುದು ಅತ್ಯಂತ ದುಃಖಕರ. ಈ ಘಟನೆಯಲ್ಲಿ ೧೫೦+ ನಾಗರಿಕರು ಹಾಗೂ ಭದ್ರತಾ ಸಿಬ್ಬಂದಿ ಗಾಯಗೊಂಡಿದ್ದಾರೆ. ಕೇಂದ್ರ ಸಚಿವ ಜೆ.ಪಿ. ನಡ್ಡಾ ಅವರು ಮಾತುಕತೆಗೆ ಅವಕಾಶ ನೀಡಿದ್ದರೂ, ಕೆಲವು ಗುಂಪುಗಳು ವಿದ್ಯಾರ್ಥಿಗಳನ್ನು ರಾಜಕೀಯ ಉದ್ದೇಶಗಳಿಗೆ ಬಳಸಿಕೊಂಡು ಭದ್ರತಾ ಪಡೆಗಳ ಮೇಲೆಯೇ ದಾಳಿ ನಡೆಸಿರುವುದನ್ನು ದೇಶದ ಜನತೆ ತೀವ್ರವಾಗಿ ಖಂಡಿಸುತ್ತಾರೆ ಎಂದು ವಿಷಾದ ವ್ಯಕ್ತಪಡಿಸಿದರು.

ವಿದ್ಯಾರ್ಥಿಗಳ ಭವಿಷ್ಯ ಸುರಕ್ಷಿತವಾಗಿರಬೇಕು, ಪರೀಕ್ಷಾ ವ್ಯವಸ್ಥೆ ಪಾರದರ್ಶಕವಾಗಿರಬೇಕು ಹಾಗೂ ನ್ಯಾಯ ನಿರ್ಭೀತಿಯಾಗಿ ದೊರೆಯಬೇಕು ಎಂಬುದು ನಮ್ಮೆಲ್ಲರ ಆಶಯ. ಆದರೆ ಅದರ ಹೆಸರಿನಲ್ಲಿ ಹಿಂಸೆ, ಅರಾಜಕತೆ ಹಾಗೂ ಸಾರ್ವಜನಿಕ ಶಾಂತಿಯ ಭಂಗಕ್ಕೆ ಯಾವುದೇ ಸಮರ್ಥನೆ ಇರಲಾರದು. ವಿದ್ಯಾರ್ಥಿಗಳ ಭವಿಷ್ಯವು ಯಾವುದೇ ರಾಜಕೀಯ ಅಥವಾ ವೈಚಾರಿಕ ಭಿನ್ನಾಭಿಪ್ರಾಯಗಳಿಗಿಂತ ದೊಡ್ಡದು. ಆದ್ದರಿಂದ ಈ ವಿಷಯವನ್ನು ರಾಜಕೀಯ ಲಾಭದ ಸಾಧನವಾಗಿಸದೆ, ಕಾನೂನು ಮತ್ತು ಸಂವಿಧಾನದ ಪರಿಧಿಯಲ್ಲಿ ವಿದ್ಯಾರ್ಥಿಗಳ ಹಿತಾಸಕ್ತಿಯನ್ನು ಕೇಂದ್ರಬಿಂದುವಾಗಿಟ್ಟುಕೊಂಡು ಪರಿಹರಿಸುವುದು ಅತ್ಯಗತ್ಯವಾಗಿದೆ ಎಂದು ಶ್ರೀನಿಧಿ ಹೆಗ್ಡೆಯವರು ತಮ್ಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



Related posts

ಮಹಾದಾನಿ ಕನ್ಯಾನ ಸದಾಶಿವ ಶೆಟ್ಟಿ ಅವರ ಮಾತೃಶ್ರೀ ಲೀಲಾವತಿ ಶೆಟ್ಟಿ ನಿಧನ,

Mumbai News Desk

ಬಂಟ್ವಾಳ : ತೆಂಕುತಿಟ್ಟು ಯಕ್ಷಗಾನದ ‘ದಶಾವತಾರಿ’ ಹಿರಿಯ ಕಲಾವಿದ, ಗೋವಿಂದ ಭಟ್‌ ಅಸ್ತಂಗತ

Mumbai News Desk

ಭಾರತ್ ಬ್ಯಾಂಕಿನ ಕಾರ್ಯಧ್ಯಕ್ಷರಾದ ಸೂರ್ಯಕಾಂತ್ ಜಯ ಸುವರ್ಣ ಅವರಿಗೆ ಬಿಲ್ಲವ ಸಮಾಜದ ಮುಖಂಡರಿಂದ ಅಭಿನಂದನೆ

Mumbai News Desk

ಇರಾನ್-ಅಮೆರಿಕ ಮಹಾಸಂಘರ್ಷಕ್ಕೆ ತಾತ್ಕಾಲಿಕ ಬ್ರೇಕ್: ಜಾಗತಿಕ ತಲ್ಲಣದ ನಡುವೆ ಶಾಂತಿ ಮಾತುಕತೆಗೆ ಉಭಯ ದೇಶಗಳ ಸಮ್ಮತಿ

Mumbai News Desk

ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತ್ ಬ್ಯಾಂಕ್ ಸಾಧನೆ: ಇನ್ಫೋಸಿಸ್ ಫಿನಾಕಲ್ ಇನ್ನೋವೇಶನ್ ಅವಾರ್ಡ್ಸ್ 2026’

Mumbai News Desk

ಮಂಗಳೂರು ವಿವಿ ಘಟಿಕೋತ್ಸವ : ರೋಹನ್ ಮೊಂತೇರೋ, ಕನ್ಯಾನ ಸದಾಶಿವ ಶೆಟ್ಟಿ, ಎಂ. ಎನ್ ರಾಜೇಂದ್ರಕುಮಾರ್ ಗೆ ಗೌರವ ಡಾಕ್ಟರೇಟ್

Mumbai News Desk