ಕಾಪು ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘ ಆಡಳಿತದ ಉಚ್ಛಿಲ ಶ್ರೀ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ಅಕ್ಟೋಬರ್ 11 ರಿಂದ 21 ರವರೆಗೆ ವೈಭವಯುತವಾಗಿ ನಡೆಯಲಿರುವ 2ನೇ ವರ್ಷದ ‘ಉಡುಪಿ-ಉಚ್ಛಿಲ ದಸರಾ-2026’ರ ಆಮಂತ್ರಣ ಪತ್ರಿಕೆಯನ್ನು ಸಂಘದ ಗೌರವ ಸಲಹೆಗಾರರಾದ ನಾಡೋಜ ಡಾ. ಜಿ. ಶಂಕರ್ ಅವರು ರವಿವಾರ ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಬರ ಪರಿಸ್ಥಿತಿ ಇರುವ ಹಿನ್ನೆಲೆಯಲ್ಲಿ ಈ ಬಾರಿಯ ದಸರಾವನ್ನು ಇತಿಮಿತಿಯಲ್ಲಿ ಹಾಗೂ ಅಚ್ಚುಕಟ್ಟಾಗಿ ಆಚರಿಸಲಾಗುವುದು ಎಂದರು.
ಅಕ್ಟೋಬರ್ 11ರಂದು ಮುಜರಾಯಿ ಇಲಾಖೆ ಸಚಿವ ಬಸವಂತಪ್ಪ ಅವರು ದಸರಾ ಉತ್ಸವವನ್ನು ಉದ್ಘಾಟಿಸಲಿದ್ದು, ದಾಂಡಿಯಾ, ಕುಣಿತ ಭಜನೆ, ನಾಟಕ ಸೇರಿದಂತೆ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ. ಹಿಂದಿನ ವರ್ಷಗಳಂತೆ ಈ ಬಾರಿಯೂ ವಿಶೇಷವಾಗಿ ಶೋಭಾ ಯಾತ್ರೆ ನಡೆಯಲಿದೆ. ದ.ಕ. ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ. ಕೋಟ್ಯಾನ್ ಮಾತನಾಡಿ, ದಸರಾ, ವಸ್ತು ಪ್ರದರ್ಶನ ಸಹಿತ ವಿಭಿನ್ನ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು. ಅಕ್ಟೋಬರ್ 20ರಂದು ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಯ ತಂಡದಿಂದ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಪರಿಣತ ತಂಡದಿಂದ ದಾಂಡಿಯಾ ನೃತ್ಯ ಪ್ರದರ್ಶನ ನಡೆಯಲಿದೆ ಎಂದು ವಿವರ ನೀಡಿದರು.
ಇದೇ ವೇಳೆ, ಮೊಗವೀರ ಸಮಾಜದ 9ನೇ ಕುಲಗುರು ಮಾಧವ ಮಂಗಳ ಪೂಜಾಯರ್ ಅವರ 31 ಅಡಿ ಎತ್ತರದ ಕುಳಿತ ಭಂಗಿಯ ಕಂಚಿನ ಪ್ರತಿಮೆಯನ್ನು 3 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದ್ದು, ಸೆಪ್ಟೆಂಬರ್ 25ರಂದು ಬೆಳಿಗ್ಗೆ 10 ಗಂಟೆಗೆ ಅನಾವರಣಗೊಳ್ಳಲಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ಅವರು ಈ ಪ್ರತಿಮೆಯನ್ನು ಅನಾವರಣಗೊಳಿಸುವರು. ಸಮಾಜದ ಗುರುಗಳ ಪರಿಚಯಕ್ಕಾಗಿ ಹಿರಿಯರು ಹಾಗೂ ಗುರಿಕಾರರ ಮಾರ್ಗದರ್ಶನದಲ್ಲಿ ಈ ಪ್ರತಿಮೆಯನ್ನು ನಿರ್ಮಿಸಲಾಗುತ್ತಿದ್ದು, ಸಮಾಜದ ಬಾಂಧವರೆಲ್ಲರೂ ಭಾಗವಹಿಸಬೇಕಾಗಿ ವಿನಂತಿಸಲಾಗಿದೆ.
ಕಾರ್ಯಕ್ರಮದ ಆರಂಭದಲ್ಲಿ ಪ್ರಧಾನ ಅರ್ಚಕ ವೇ. ಮೂ. ರಾಘವೇಂದ್ರ ಉಪಾಧ್ಯಾಯ ಅವರು ಪ್ರಾರ್ಥನಾ ವಿಧಿ ನೆರವೇರಿಸಿದರು. ಈ ಸಂದರ್ಭದಲ್ಲಿ ಉಡುಪಿ ಉಚ್ಛಿಲ ದಸರಾ ಸಮಿತಿ ಅಧ್ಯಕ್ಷ ವಿನಯ ಕರ್ಕೇರ, ಕ್ಷೇತ್ರಾಡಳಿತ ಸಮಿತಿ ಅಧ್ಯಕ್ಷ ಗಿರಿಧರ್ ಸುವರ್ಣ, ದ.ಕ. ಮೊಗವೀರ ಮಹಾಜನ ಸಂಘದ ಗೌರವ ಪ್ರಧಾನ ಕಾರ್ಯದರ್ಶಿ ಶರಣ್ ಕುಮಾರ್ ಮಟ್ಟು, ಕೋಶಾಧಿಕಾರಿ ರತ್ನಾಕರ ಸಾಲ್ಯಾನ್, ಪ್ರಮುಖರಾದ ಗುಂಡು ಬಿ. ಅಮೀನ್ ಕಿದಿಯೂರು, ವಾಸುದೇವ ಸಾಲ್ಯಾನ್ ಕಟಪಾಡಿ, ಸುಜಿತ್ ಸಾಲ್ಯಾನ್ ಮೂಲ್ಕಿ, ಸತೀಶ್ ಕುಂದರ್ ಮಲ್ಪೆ, ಮನೋಜ್ ಸಾಲ್ಯಾನ್, ರವೀಶ್ ಕೊರವಡಿ, ದಿನೇಶ್ ಎರ್ಮಾಳ್, ಕಿರಣ್ ಕುಮಾರ್ ಪಿತ್ರೋಡಿ, ವಿಶ್ವಾಸ್ ಅಮೀನ್, ರಾಜೇಂದ್ರ ಸುವರ್ಣ ಹಿರಿಯಡ್ಕ, ಮನೋಜ್ ಕಾಂಚನ್, ಕವಿತಾ ಶರತ್, ಸುಗುಣಾ ಎಸ್. ಕರ್ಕೇರ, ಸತೀಶ್ ಸಾಲ್ಯಾನ್, ಅಶೋಕ್ ಸುವರ್ಣ ಮುಂಬೈ, ವಿಜಯ ಸುವರ್ಣ ಬೆಂಗ್ರೆ, ನಾರಾಯಣ ಸಿ. ಕರ್ಕೇರ, ಮೋಹನ್ ಬಂಗೇರ ಕಾಪು ಹಾಗೂ ಪ್ರಬಂಧಕ ಸತೀಶ್ ಅಮೀನ್ ಪಡುಕರೆ ಉಪಸ್ಥಿತರಿದ್ದರು.




