
ಯೋಗ ವಿಶ್ವಕ್ಕೆ ಭಾರತ ನೀಡಿದ ಅಮೂಲ್ಯ ಕೊಡುಗೆ: ಕರ್ನೂರು ಶಂಕರ ಆಳ್ವ
ವಸಯಿ, ಜೂ. 23: ಯೋಗವು ಮನಸ್ಸು ಮತ್ತು ದೇಹವನ್ನು ಸಮತೋಲನದಲ್ಲಿಡುವ ಪ್ರಾಚೀನ ಭಾರತೀಯ ಕಲೆ ಆಗಿದ್ದು, ಇದು ವಿಶ್ವಕ್ಕೆ ಭಾರತ ನೀಡಿದ ಅಮೂಲ್ಯ ಕೊಡುಗೆ ಎಂದು ವಸಯಿ ಕರ್ನಾಟಕ ಸಂಘದ ಅಧ್ಯಕ್ಷ ಕರ್ನೂರು ಶಂಕರ ಆಳ್ವ ಅಭಿಪ್ರಾಯಪಟ್ಟರು.
ಅವರು ಜೂನ್ 21ರಂದು ಸಾಯಿ ನಗರದ ಸ್ವಾಮಿನಾರಾಯಣ ಮಂದಿರದ ಸಭಾಂಗಣದಲ್ಲಿ ವಸಯಿ ಕರ್ನಾಟಕ ಸಂಘದ ವತಿಯಿಂದ ಆಯೋಜಿಸಲಾದ ಅಂತರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನಿರಂತರ ಪ್ರಯತ್ನದ ಫಲವಾಗಿ 2014ರಲ್ಲಿ ಸುಮಾರು 177 ರಾಷ್ಟ್ರಗಳು ಅಂತರಾಷ್ಟ್ರೀಯ ಯೋಗ ದಿನಾಚರಣೆಗೆ ಬೆಂಬಲ ವ್ಯಕ್ತಪಡಿಸಿದ್ದು, 2017ರಲ್ಲಿ 190ಕ್ಕೂ ಹೆಚ್ಚು ದೇಶಗಳು ಇದನ್ನು ಆಚರಿಸಿವೆ.. ಪ್ರತಿಯೊಬ್ಬರೂ ದಿನನಿತ್ಯ ಕನಿಷ್ಠ ಅರ್ಧ ಗಂಟೆಯಾದರೂ ಯೋಗಾಭ್ಯಾಸಕ್ಕೆ ಮೀಸಲಿಡಬೇಕು. ಯೋಗದಿಂದ ಆರೋಗ್ಯ, ಮಾನಸಿಕ ಶಾಂತಿ ಮತ್ತು ನೆಮ್ಮದಿ ದೊರೆಯುವುದರೊಂದಿಗೆ ದೈಹಿಕ ಕ್ಷೇಮವೂ ಕಾಪಾಡಲ್ಪಡುತ್ತದೆ ಎಂದು ನುಡಿದರು.
ಸಂಘದ ಗೌರವಾಧ್ಯಕ್ಷ ವಿಶ್ವನಾಥ್ ಪಿ. ಶೆಟ್ಟಿ ಮಾತನಾಡಿ, ಯೋಗವು ವ್ಯಕ್ತಿಯ ದೈಹಿಕ ಹಾಗೂ ಮಾನಸಿಕ ಆರೋಗ್ಯ ವೃದ್ಧಿಯಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ನಮ್ಮ ದೈನಂದಿನ ಚಟುವಟಿಕೆಯಲ್ಲಿ ಸ್ವಲ್ಪ ಸಮಯವನ್ನು ಯೋಗಕ್ಕಾಗಿ ಮೀಸಲಿಡುವುದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು. ಯೋಗ ದಿನಾಚರಣೆಯ ಕಾರ್ಯಕ್ರಮಗಳಿಗೆ ಹೆಚ್ಚಿನ ಪ್ರಚಾರವನ್ನು ಕೊಡಬೇಕು. ಮಕ್ಕಳು ಹಾಗೂ ಹಿರಿಯರು ಅಧಿಕ ಸಂಖ್ಯೆಯಲ್ಲಿ ಇಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಯೋಗದ ಪ್ರಯೋಜನ ಪಡೆಯಬೇಕು ಎಂದು ಅಭಿಪ್ರಾಯಪಟ್ಟರು.
ಸಂಘದ ಜೊತೆ ಸಲಹೆಗಾರ ಓ.ಪಿ. ಪೂಜಾರಿ ಅವರು ಪತಂಜಲಿ ತಂಡದ ಯೋಗ ಸಾಧನೆಗಳ ಕುರಿತು ಮಾಹಿತಿ ನೀಡಿದರು. ಯೋಗ ಸಾಧಕರಾದ ಪ್ರಮೀಳಾ ಆರ್. ಶೆಟ್ಟಿ ಹಾಗೂ ಸುಮತಿ ಓ. ಪೂಜಾರಿ ಯೋಗದ ವಿವಿಧ ಆಸನಗಳ ಪ್ರಾತ್ಯಕ್ಷಿಕೆ ನೀಡುವುದರೊಂದಿಗೆ ಯೋಗದ ದೈಹಿಕ ಮತ್ತು ಮಾನಸಿಕ ಪ್ರಯೋಜನಗಳ ಕುರಿತು ವಿವರಿಸಿದರು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಮಾಜಬಾಂಧವರು ಯೋಗಾಭ್ಯಾಸದಲ್ಲಿ ಉತ್ಸಾಹದಿಂದ ಪಾಲ್ಗೊಂಡರು.
ಈ ಸಂದರ್ಭದಲ್ಲಿ ಯೋಗ ಗುರುಗಳನ್ನು ಶಾಲು ಹಾಗೂ ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು. ಶಕುಂತಳಾ ಪೂಜಾರಿ ಅವರ ಪ್ರಾರ್ಥನೆಯೊಂದಿಗೆ ದೀಪಪ್ರಜ್ವಲನೆ ನೆರವೇರಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷ ರವೀಂದ್ರ ಕೆ. ಶೆಟ್ಟಿ, ಕೋಶಾಧಿಕಾರಿ ವಿಜಯ ಎಮ್ ಶೆಟ್ಟಿ, ಸಲಹಾ ಸಮಿತಿ ಅಧ್ಯಕ್ಷ ಪಾಂಡು ಎಲ್ ಶೆಟ್ಟಿ, ಮಹಿಳಾ ವಿಭಾಗದ ಅಧ್ಯಕ್ಷೆ ಉಷಾ ಶ್ರೀಧರ್ ಶೆಟ್ಟಿ, ಜೊತೆ ಕೋಶಾಧಿಕಾರಿ ಗಂಗಾಧರ ಟಿ ಶೆಟ್ಟಿ ಹಾಗೂ ಸದಸ್ಯ ನೋಂದಣಿ ಸಮಿತಿ ಅಧ್ಯಕ್ಷ ಹರೀಶ್ ಎನ್ ಶೆಟ್ಟಿ ಉಪಸ್ಥಿತರಿದ್ದರು.
ಕಾರ್ಯಕ್ರಮ ಸಮಿತಿಯ ಅಧ್ಯಕ್ಷ ಯಶೋಧರ್ ವಿ ಕೋಟ್ಯಾನ್ ಮಹಿಳಾ ವಿಭಾಗದ ಕಾರ್ಯದರ್ಶಿ ಪೂರ್ಣಿಮಾ ಅನುಪ್ ಶೆಟ್ಟಿ, ಕೋಶಾಧಿಕಾರಿ ಭಾರತಿ ಹರೀಶ್ ಶೆಟ್ಟಿ, ಸಮಿತಿ ಸದಸ್ಯರು ಹಾಗೂ ಯುವ ವಿಭಾಗ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು. ಪ್ರಚಾರ ಸಮಿತಿಯ ಕಾರ್ಯಾಧ್ಯಕ್ಷ ಸುಕೇಶ್ ರೈ ಕಾರ್ಯಕ್ರಮ ನಿರೂಪಿಸಿದರೆ, ಗೌರವ ಪ್ರಧಾನ ಕಾರ್ಯದರ್ಶಿ ಹರಿಪ್ರಸಾದ್ ಎಸ್ ಶೆಟ್ಟಿ ವಂದಿಸಿದರು. ಬಳಿಕ ಲಘು ಉಪಾಹಾರದ ವ್ಯವಸ್ಥೆ ಮಾಡಲಾಗಿತ್ತು.




