
ಮುಂಬೈ: ಮಹಾರಾಷ್ಟ್ರದ ಮಣ್ಣಿನಲ್ಲಿ ತುಳುನಾಡಿನ ವೈಶಿಷ್ಟ್ಯಗಳನ್ನು ಜೀವಂತವಾಗಿರಿಸುವಲ್ಲಿ ಸಂಘ-ಸಂಸ್ಥೆಗಳ ಪಾತ್ರ ಮಹತ್ತರವಾದದ್ದು. ಅಂತಹ ಸಂಸ್ಥೆಗಳಲ್ಲೊಂದಾದ ಮುಂಬೈನ ಸಾಫಲ್ಯ ಸೇವಾ ಸಂಘವು ತುಳುನಾಡಿನ ಆಟಿ ತಿಂಗಳಿನ ವಿಶೇಷತೆಯನ್ನು ಸಾರುವ ‘ಆಟಿದ ಒಂಜಿ ದಿನ’ ಎಂಬ ಕಾರ್ಯಕ್ರಮವನ್ನು ಜುಲೈ 26ರಂದು ಮಧ್ಯಾಹ್ನ 2:00 ಗಂಟೆಯಿಂದ ಕುರ್ಲಾ ಪೂರ್ವದಲ್ಲಿರುವ ಬಂಟರ ಭವನದ ಅನೆಕ್ಸ್ ಹಾಲ್ನಲ್ಲಿ ಆಯೋಜಿಸಿದೆ.
ಸಾಫಲ್ಯ ಸೇವಾ ಸಂಘದ ಅಧ್ಯಕ್ಷರಾದ ಶ್ರೀನಿವಾಸ್ ಸಪಲ್ಯ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಗೌರವಾನ್ವಿತ ಅತಿಥಿಗಳಾಗಿ ಕನ್ನಡ ಭವನ ಜೂನಿಯರ್ ಕಾಲೇಜಿನ ಪ್ರಾಂಶುಪಾಲೆ ಅಮೃತಾ ಎ. ಶೆಟ್ಟಿ, ಪದ್ಮಶಾಲಿ ಸಮಾಜದ ಮಾಜಿ ಅಧ್ಯಕ್ಷೆ ಶ್ರೀಮತಿ ಸರೋಜಿನಿ ಶೆಟ್ಟಿಗಾರ್, ಮುಂಬೈ ಹೈಕೋರ್ಟ್ ನ್ಯಾಯವಾದಿ ಶ್ರೀಮತಿ ವಸಂತಿ ಕುಂದರ್ ಹಾಗೂ ಸಾಮಾಜಿಕ ಕಾರ್ಯಕರ್ತೆ ಶ್ರೀಮತಿ ಗೀತಾ ಜೀವನ್ ಶ್ರೀಯಾನ್ ಆಗಮಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಪ್ರಖ್ಯಾತ ಚರ್ಮರೋಗ ತಜ್ಞರಾದ ಡಾ. ಪಾರುಲ್ ಜೈಸ್ವಾಲ್ ಅವರು ‘ಮಹಿಳೆಯರ ಆರೋಗ್ಯ ಸಬಲೀಕರಣ’ದ ಅಡಿಯಲ್ಲಿ ಸ್ತ್ರೀರೋಗ ಹಾಗೂ ಚರ್ಮದ ಸಮಸ್ಯೆಗಳ ಕುರಿತು ವಿಶೇಷ ಉಪನ್ಯಾಸ ನೀಡಲಿದ್ದಾರೆ.
ತುಳುನಾಡಿನ ಸಂಪ್ರದಾಯ ಹಾಗೂ ವೈವಿಧ್ಯಮಯ ಆಹಾರ ಶೈಲಿಯನ್ನು ಪರಿಚಯಿಸುವ ಉದ್ದೇಶದಿಂದ ‘ಆಟಿ ಆಹಾರ ಸ್ಪರ್ಧೆ’ಯನ್ನು ಆಯೋಜಿಸಲಾಗಿದೆ.
ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಿ, ಸಮಾಜ ಬಾಂಧವರ ಅನುಕೂಲಕ್ಕಾಗಿ ಕೇಂದ್ರ ಸರ್ಕಾರದ ಆಯುಷ್ಮಾನ್ ಭಾರತ್, ವಯ ವಂದನಾ, ಅಭಾ ಹಾಗೂ ಇ-ಶ್ರಮ್ ಯೋಜನೆಯಂತಹ ಸರ್ಕಾರಿ ಆರೋಗ್ಯ ಕಾರ್ಡ್ಗಳ ನೋಂದಣಿ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ. ಪೋಸ್ಟ್ ಆಫೀಸ್ನ ವಿವಿಧ ಉಳಿತಾಯ ಯೋಜನೆಗಳು ಹಾಗೂ ಹೂಡಿಕೆಗಳ ಬಗ್ಗೆ ಶ್ರೀ ಕಿರಣ್ ಪಾಟೀಲ್ ಅವರ ತಂಡದವರು ಮಾರ್ಗದರ್ಶನ ನೀಡಲಿದ್ದಾರೆ. ಉಚಿತ ಆರೋಗ್ಯ ಕಾರ್ಡ್ ಮತ್ತು ಉಳಿತಾಯ ಯೋಜನೆಗಳ ಮಾಹಿತಿ ಮಾಡಿಕೊಡಲಾಗುವುದು. ಕಾರ್ಯಕ್ರಮದ ನಂತರ ಪ್ರೀತಿಭೋಜನದ ವ್ಯವಸ್ಥೆಯಿದೆ.
ಸಂಘದ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಈ ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳುವಂತೆ ಸಂಘದ ಅಧ್ಯಕ್ಷರಾದ ಶ್ರೀನಿವಾಸ ಸಪಲ್ಯ, ಉಪಾಧ್ಯಕ್ಷರಾದ ಕೃಷ್ಣಕುಮಾರ್ ಬಂಗೇರ, ಜೀವನ್ ಶ್ರೀಯಾನ್, ಪ್ರಧಾನ ಕಾರ್ಯದರ್ಶಿ ಭಾಸ್ಕರ ಸಪಲಿಗ, ಕೋಶಾಧಿಕಾರಿ ಹೇಮಂತ್ ಸಪಲಿಗ, ಹಾಗೂ ಸಂಘದ ಮಹಿಳಾ ವಿಭಾಗದ ಅಧ್ಯಕ್ಷೆ ಶ್ರೀಮತಿ ಲಕ್ಷ್ಮಿ ಮೆಂಡನ್ ಮತ್ತು ಉಪಾಧ್ಯಕ್ಷೆ ಶ್ರೀಮತಿ ವಿಮಲಾ ಬಂಗೇರ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.





