ಬೋರಿವಲಿ ಪೂರ್ವದ ಸಂಜಯ ಗಾಂಧಿ ರಾಷ್ಟ್ರೀಯ ಉದ್ಯಾನದ ಸನಿಹದ ಶ್ರೀಕೃಷ್ಣ ನಗರದ ನ್ಯಾನ್ಸಿ ಕಾಂಫ್ಲೆಕ್ಸ್ (ನವನಿರ್ಮಿತವಾಗಿರುವ ಶೀತಲ್ ರಿಗಾಲಿಯಾ) ಇಲ್ಲಿಯ ಶ್ರೀ ಜಗದೀಶ್ವರಿ ಮಂದಿರದಲ್ಲಿ ಇದೇ ಬುಧವಾರ ದಿನಾಂಕ ಜು.29, ಗುರುಪೂರ್ಣಿಮೆಯಂದು ಸಂಜೆ 6-00 ರಿಂದ 8-00ರ ತನಕ ವಿಶೇಷವಾದ ಭಗವತಿ ಸೇವಾರೂಪದಲ್ಲಿ ದುರ್ಗಾ ನಮಸ್ಕಾರ ಪೂಜೆ ನಡೆಯಲಿದೆ.
ಇದೇ ವರ್ಷ ಫೆಬ್ರುವರಿಯಲ್ಲಿ ಬಹು ವಿಜೃಂಭಣೆಯಿಂದ ಪುನ: ಪ್ರತಿಷ್ಠಾಪನೆಗೊಂಡು ಬ್ರಹ್ಮಕಲಶೋತ್ಸವ ನೆರವೇರಿದ ಕ್ಷೇತ್ರವಿದು. ಅದರ ನೆನಪು ಮರುಕಳಿಸುತ್ತಿರುವ ಇದೇ ಸುಸಮಯದಲ್ಲಿ ಈಗ ಅತಿ ವಿಶೇಷವಾಗಿ ಶ್ರೀ ಜಗದೀಶ್ವರಿ ಮಾತೆಯ ಪ್ರೀತ್ಯರ್ಥವಾಗಿ ಈ ದೀಪಾರಾಧನೆಯ ಮಹಾಪೂಜೆ ಜರುಗಲಿರುವುದು.
ಈ ಕ್ಷೇತ್ರದ ಆಡಳಿತ ಮಂಡಳಿ ಇದರ ಸಂಕಲ್ಪದಂತೆ, ತಂತ್ರಿಗಳಾದ ವಿದ್ವಾನ್ ಸಂತೋಷ್ ಕುಮಾರ್ ಭಟ್ ಹಾಗೂ ಪ್ರಧಾನ ಅರ್ಚಕರಾದ ವಿದ್ವಾನ್ ವಿಜಯ ಉಪಾಧ್ಯಾಯ ಇವರ ನೇತೃತ್ವದಲ್ಲಿ, ಹಾಗೂ ಕೇಂದ್ರಬಿಂದುವಾಗಿ, ಸ್ತೋತ್ರಗಳನ್ನು ಸುಶ್ರಾವ್ಯವಾಗಿ ಪಠಿಸುತ್ತಾ, ವೈಧಿಕ ಪ್ರಪಂಚದಲ್ಲಿ ಹೊಸ ಚಾಪನ್ನು ಮೂಡಿಸಿದ ವಿದ್ವಾನ್ ಸುಬ್ರಹ್ಮಣ್ಯ ಕಾರಂತ ಇವರ ಸಹಯೋಗದೊಂದಿಗೆ ಶ್ರೀ ಭಗವತಿ ಸೇವಾ ರೂಪದಲ್ಲಿ ದುರ್ಗಾನಮಸ್ಕಾರ ಪೂಜೆಯ ವೈಭವದ ಕಾರ್ಯಕ್ರಮ ನಡೆಯಲಿದೆ. ಸುಬ್ರಹ್ಮಣ್ಯ ಕಾರಂತರು ಊರಿನಿಂದ ಆಗಮಿಸಿ, ಕಾರ್ಯಕ್ರಮದಲ್ಲಿ ಭಾಗವಹಿಸಿ, ಶ್ರೀ ಜಗದೀಶ್ವರಿ ಮಾತೆಯ ಸೇವೆ ಮಾಡಲಿದ್ದಾರೆ. ಅವರಿಂದ ದೇವಿ ಮಹಾತ್ಮೆ ಹಾಗೂ ಲಲಿತ ಸಹಸ್ರನಾಮ ಇತ್ಯಾದಿ ಮಂತ್ರಘೋಷ ನಡೆಯಲಿದೆ. ಅಲ್ಲದೆ ತಾಯಿಯ ವಿಶೇಷವಾದ ನಾಮಗಳನ್ನು ಭಕ್ತವೃಂದದಿಂದ ಶ್ರೀಯುತರು ನುಡಿಸಲಿದ್ದಾರೆ. ಮುಂಬಯಿ ಮಹಾನಗರದಲ್ಲಿ ಇದು ಹೊಸ ಪ್ರಯತ್ನ. ಇಂತಹ ಸೌಭಾಗ್ಯವನ್ನು ಭಕ್ತಾಧಿಗಳು ತಮ್ಮ ನಾಲಗೆಗಳಿಂದ ನುಡಿದು, ಕರ್ಣಗಳಲ್ಲಿ ತುಂಬಿಸಿಕೊಂಡು, ದೀಪಾರಾಧನೆಯ ಸೊಬಗನ್ನು ಅಕ್ಷಿಗಳಿಂದ ದರ್ಶಿಸಿ, ಪುನೀತರಾಗಬೇಕಾಗಿ ಆಡಳಿತ ಮಂಡಳಿ, ವಿಪ್ರವೃಂದ ಹಾಗೂ ಸರ್ವ ಸದಸ್ಯರ ಕಳಕಳಿಯ ವಿನಂತಿ.





