
ಹರಿಕಥೆ ಕಾರ್ಯಕ್ರಮಗಳು ಸಾಂಸ್ಕೃತಿಕ ಪರಂಪರೆ ಉಳಿಸುವಲ್ಲಿ ಪ್ರಮುಖ ಪಾತ್ರ: ಶಂಕರ್ ಶೆಟ್ಟಿ ಮುಲುಂಡು
ಭಾಂಡುಪ್, ಜು. 30: ನಮ್ಮ ಸಾಂಸ್ಕೃತಿಕ ಮತ್ತು ಧಾರ್ಮಿಕ ಪರಂಪರೆಯನ್ನು ಮುಂದಿನ ಪೀಳಿಗೆಗೆ ತಲುಪಿಸುವಲ್ಲಿ ಹರಿಕಥೆ ಕಾರ್ಯಕ್ರಮಗಳು ಮಹತ್ವದ ಪಾತ್ರ ವಹಿಸುತ್ತವೆ ಎಂದು ಜಿ.ಎಸ್. ಶೆಟ್ಟಿ ಇಂಟರ್ನ್ಯಾಷನಲ್ ಶಾಲೆಯ ಅಧ್ಯಕ್ಷ ಶಂಕರ್ ಶೆಟ್ಟಿ ಮುಲುಂಡು ಹೇಳಿದರು.
ಭಾಂಡುಪ್ ಪಶ್ಚಿಮದ ಎಲ್.ಬಿ.ಎಸ್. ಮಾರ್ಗದಲ್ಲಿರುವ ಸ್ವಾಮಿ ನಿತ್ಯಾನಂದ ಮಂದಿರದಲ್ಲಿ ಗುರು ಪೂರ್ಣಿಮೆಯ ಅಂಗವಾಗಿ ಆಯೋಜಿಸಲಾದ “ಪರಬ್ರಹ್ಮ ಶ್ರೀ ಗುರು ನಿತ್ಯಾನಂದ ಕಥಾ ಕೀರ್ತನ” ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಡಾ. ವಿಜಯಕುಮಾರ್ ಶೆಟ್ಟಿ ತೋನ್ಸೆ ಮಾತನಾಡಿ, ಗುರು ಪೂರ್ಣಿಮೆಯ ಪವಿತ್ರ ದಿನದಂದು ಭಗವಾನ್ ನಿತ್ಯಾನಂದ ಸ್ವಾಮೀಜಿಯವರ ಚರಿತ್ರೆಯನ್ನು ಹರಿಕಥೆಯ ಮೂಲಕ ಆಲಿಸುವ ಅವಕಾಶ ದೊರೆತಿರುವುದು ಎಲ್ಲರಿಗೂ ಸೌಭಾಗ್ಯವಾಗಿದೆ ಎಂದರು. ಇಂತಹ ಆಧ್ಯಾತ್ಮಿಕ ಕಾರ್ಯಕ್ರಮಗಳು ಭಕ್ತಿ, ಸಂಸ್ಕಾರ ಹಾಗೂ ಜೀವನ ಮೌಲ್ಯಗಳನ್ನು ಜನರಲ್ಲಿ ಬಲಪಡಿಸುತ್ತವೆ ಎಂದು ಹೇಳಿದರು.
ಬಿಲ್ಲವರ ಅಸೋಸಿಯೇಷನ್ ಸಾಂತಾಕ್ರೂಜ್ನ ಮಾಜಿ ಅಧ್ಯಕ್ಷ ಚಂದ್ರಶೇಖರ್ ಪೂಜಾರಿ ಮಾತನಾಡಿ, ಸಂಗೀತ, ಸಾಹಿತ್ಯ ಮತ್ತು ಭಕ್ತಿಯ ಸಮ್ಮಿಲನವಾಗಿರುವ ಹರಿಕಥೆಯು ಸಮಾಜದಲ್ಲಿ ಭಕ್ತಿಭಾವ, ಸೌಹಾರ್ದತೆ ಹಾಗೂ ಸನ್ಮಾರ್ಗವನ್ನು ಬೆಳೆಸುವ ಅಪೂರ್ವ ಕಲಾರೂಪವಾಗಿದೆ. ಆದ್ದರಿಂದ ಇಂತಹ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಸಮಾಜದ ಎಲ್ಲ ವರ್ಗದವರು ಪ್ರೋತ್ಸಾಹ ನೀಡಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನಿತ್ಯಾನಂದ ಟ್ರಸ್ಟ್ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶಕುಂತಲಾ ಕೋಟ್ಯಾನ್ ಮಾತನಾಡಿ, ಭಾರತೀಯ ಸಂಸ್ಕೃತಿ ಮತ್ತು ಆಧ್ಯಾತ್ಮಿಕ ಪರಂಪರೆಯನ್ನು ಉಳಿಸಿ ಬೆಳೆಸಲು ಇಂತಹ ಕಾರ್ಯಕ್ರಮಗಳು ಅತ್ಯಂತ ಅಗತ್ಯವಾಗಿದ್ದು, ಪ್ರತಿಯೊಬ್ಬರೂ ಇದರ ಸಂರಕ್ಷಣೆಗೆ ಕೈಜೋಡಿಸಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಬಿಲ್ಲವರ ಅಸೋಸಿಯೇಷನ್ ಭಾಂಡುಪ್ ಸ್ಥಳೀಯ ಕಚೇರಿಯ ಅಧ್ಯಕ್ಷ ಜನಾರ್ಧನ ಪೂಜಾರಿ, ಉದ್ಯಮಿ ಜಗದೀಶ್ ಎಸ್. ಪೂಜಾರಿ (ಇರಾ ಆಚೆ ಬೈಲು), ಟ್ರಸ್ಟ್ ಕಾರ್ಯದರ್ಶಿ ಭೋಜ ಪೂಜಾರಿ, ಕೋಶಾಧಿಕಾರಿ ಸುರೇಂದ್ರನಾಥ್ ಸುವರ್ಣ ಹಾಗೂ ಕವಿ ಕೆ. ಲಕ್ಷ್ಮೀನಾರಾಯಣ ರೈ ಹರೇಕಳ ಅತಿಥಿಗಳಾಗಿ ಉಪಸ್ಥಿತರಿದ್ದರು. ಸಂಘದ ಪದಾಧಿಕಾರಿಗಳು, ಸದಸ್ಯರು ಹಾಗೂ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
ಟ್ರಸ್ಟ್ನ ಭಜನಾ ಮಂಡಳಿಯ ಪದಾಧಿಕಾರಿ ರಮೇಶ್ ಬಿ. ಸಾಲ್ಯಾನ್ ಕಾರ್ಯಕ್ರಮ ನಿರೂಪಿಸಿದರು. ಸದಸ್ಯ ನಿರಂಜನ್ ಸುವರ್ಣ ವಂದನಾರ್ಪಣೆ ಸಲ್ಲಿಸಿದರು.
ಬಳಿಕ ಕಲಾಸಾರಥಿ ಹರಿದಾಸ ಶ್ರೀ ತೋನ್ಸೆ ಪುಷ್ಕಳ್ ಕುಮಾರ್ ಅವರಿಂದ “ಪರಬ್ರಹ್ಮ ಶ್ರೀ ಗುರು ನಿತ್ಯಾನಂದ ಕಥಾ ಕೀರ್ತನ” ಮನೋಜ್ಞವಾಗಿ ನಡೆಯಿತು. ಹಾರ್ಮೋನಿಯಂನಲ್ಲಿ ಶೇಖರ್ ಸಸಿಹಿತ್ಲು, ತಬ್ಲಾದಲ್ಲಿ ಜನಾರ್ಧನ ಸಾಲ್ಯಾನ್ ಹಾಗೂ ಪ್ರಶಾಂತ್ ಸಂಗೀತ ಸಹಕಾರ ನೀಡಿದರು.





