ಮುಂಬಯಿ: ಕರ್ನಾಟಕ ಸರ್ಕಾರದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು, ಮುಂಬಯಿಯ ಖ್ಯಾತ ಸಮಾಜ ಸೇವಕ ಹಾಗೂ ಮುಂಬಯಿ ಕ್ರಿಕೆಟ್ ಅಸೋಸಿಯೇಷನ್ನ ಮಾಜಿ ಜೊತೆ ಕೋಶಾಧಿಕಾರಿ ಡಾ. ಪಿ.ವಿ. ಶೆಟ್ಟಿ ಅವರನ್ನು ಕರ್ನಾಟಕ ಸಂಘ ಮುಂಬಯಿ ವತಿಯಿಂದ ಅಭಿನಂದಿಸಿ ಗೌರವಿಸಲಾಯಿತು.
ಬೋರಿವಲಿ ಪೂರ್ವದ ವೆಲ್ಕಮ್ ಹೋಟೆಲ್ನಲ್ಲಿ ಇತ್ತೀಚೆಗೆ ನಡೆದ ಸಮಾರಂಭದಲ್ಲಿ ಕರ್ನಾಟಕ ಸಂಘದ ಅಧ್ಯಕ್ಷ ಡಾ. ಭರತ್ ಕುಮಾರ್ ಪೊಲಿಪು ಹಾಗೂ ಗೌರವ ಕಾರ್ಯದರ್ಶಿ ಓಂದಾಸ್ ಕಣ್ಣಂಗಾರ್ ಅವರು ಡಾ. ಶೆಟ್ಟಿಯವರಿಗೆ ಶಾಲು ಹೊದಿಸಿ, ಪುಷ್ಪಗುಚ್ಛ ನೀಡಿ ಗೌರವ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಡಾ. ಭರತ್ ಕುಮಾರ್ ಪೊಲಿಪು ಅವರು, ಕರ್ನಾಟಕ ಸಂಘವು ಮುಂಬಯಿಯಲ್ಲಿ ಕೈಗೆತ್ತಿಕೊಂಡಿರುವ ಬಹುಕೋಟಿ ವೆಚ್ಚದ ಸಾಂಸ್ಕೃತಿಕ ಸಮುಚ್ಚಯದ ಯೋಜನೆಯ ಕುರಿತು ಸಮಗ್ರ ಮಾಹಿತಿ ನೀಡಿದರು. ಮುಂಬಯಿ ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಾಗಿ ಸಂಘವು ಹಮ್ಮಿಕೊಂಡಿರುವ ಈ ಯೋಜನೆಯು ಸಾಂಸ್ಕೃತಿಕ ಮೈಲಿಗಲ್ಲಾಗಲಿದೆ ಎಂದು ಅವರು ಆಶಯ ವ್ಯಕ್ತಪಡಿಸಿದರು.
ಶಿಕ್ಷಣಕ್ಕೆ ಆದ್ಯತೆ ನೀಡಿ – ಡಾ. ಪಿ.ವಿ. ಶೆಟ್ಟಿ:
ಗೌರವ ಸ್ವೀಕರಿಸಿ ಮಾತನಾಡಿದ ಡಾ. ಪಿ.ವಿ. ಶೆಟ್ಟಿ, “ಮನುಷ್ಯ ತನ್ನ ಜೀವಿತಾವಧಿಯಲ್ಲಿ ಸಾಧ್ಯವಾದಷ್ಟು ಜನಸೇವೆಯಲ್ಲಿ ತೊಡಗಿಸಿಕೊಳ್ಳಬೇಕು ಎಂಬ ತತ್ವದಲ್ಲಿ ನನಗೆ ನಂಬಿಕೆಯಿದೆ. ವಿದ್ಯಾಭ್ಯಾಸವು ಮನುಷ್ಯನಿಗೆ ಅತಿ ಅಗತ್ಯವಾಗಿದ್ದು, ಶಿಕ್ಷಣ ಕ್ಷೇತ್ರಕ್ಕೆ ನೆರವು ನೀಡುವ ಮೂಲಕ ಮುಂದಿನ ಜನಾಂಗವನ್ನು ರೂಪಿಸಬೇಕು ಎಂಬುದು ನನ್ನ ತಂದೆಯವರ ಆಶಯವಾಗಿತ್ತು. ಅದನ್ನು ನಾನು ಇಂದಿಗೂ ಪಾಲಿಸುತ್ತಿದ್ದೇನೆ,” ಎಂದರು.
ಮುಂದುವರಿದು ಮಾತನಾಡಿದ ಅವರು, “ಸಂಘ-ಸಂಸ್ಥೆಗಳು ಸಂಸ್ಕೃತಿ, ವೈದ್ಯಕೀಯ ಮತ್ತು ಶಿಕ್ಷಣಕ್ಕೆ ಮೊದಲ ಆದ್ಯತೆ ನೀಡಬೇಕು. ಕನ್ನಡ ಭಾಷೆಯ ಬೆಳವಣಿಗೆಗೆ ಶ್ರಮಿಸಬೇಕು. ಈ ನಿಟ್ಟಿನಲ್ಲಿ ಕರ್ನಾಟಕ ಸಂಘದ ಕಾರ್ಯವೈಖರಿ ಶ್ಲಾಘನೀಯವಾಗಿದ್ದು, ಸಂಘದ ನೂತನ ಯೋಜನೆಗೆ ನನ್ನ ಸಂಪೂರ್ಣ ಸಹಕಾರ ನೀಡಲಾಗುವುದು,” ಎಂದು ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಸಂಘದ ಸದಸ್ಯರಾದ ಸಂಘಟಕ ಅಶೋಕ ಸಸಿಹಿತ್ಲು ಹಾಗೂ ಸಾಹಿತಿ ಹರೀಶ್ ಹೆಜ್ಮಾಡಿ ಉಪಸ್ಥಿತರಿದ್ದರು.
ವರದಿ: ದಿನೇಶ್ ಕುಲಾಲ್




