June 25, 2026
Mumbai News Kannada
ಸುದ್ದಿ

ಮುಂಬೈ ಲೋಕಲ್ ಟ್ರೈನ್ ಕೊಲೆ: ಸಿಸಿಟಿವಿ ದೃಶ್ಯದಲ್ಲಿದ್ದ ಒಂದೇ ಒಂದು ಲೋಗೋ ತಂದುಕೊಟ್ಟಿತು ಮಂಗಳೂರು ಮೂಲದ ಕೊಲೆಗಾರನ ಸುಳಿವು!





ಮುಂಬೈ ಲೋಕಲ್ ಟ್ರೈನ್‌ನ ಫಸ್ಟ್‌ ಕ್ಲಾಸ್ ಬೋಗಿಯಲ್ಲಿ ಸಹ-ಪ್ರಯಾಣಿಕ ಮಯಂಕ್ ಲೋಹರ್ (22) ಎಂಬ ಯುವಕನನ್ನು ಚಾಕುವಿನಿಂದ ಇರಿದು ಕೊಂದ ಪ್ರಕರಣಕ್ಕೆ ಸಂಬಂಧಿಸಿದಂತೆ ಬೊರಿವಲಿ ರೈಲ್ವೆ ಪೊಲೀಸರು (GRP) ಆರೋಪಿ ರೋಷನ್ ಸುವರ್ಣ (30) ಎಂಬಾತನನ್ನು ಬಂಧಿಸಿದ್ದಾರೆ.
ಆರೋಪಿ ರೋಷನ್ ಸುವರ್ಣ ಮೀರಾ ರೋಡ್ ನಿವಾಸಿಯಾಗಿದ್ದು, ಮುಂಬೈ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಕಾರ್ಗೋ ಹಬ್‌ನ (ಸರಕು ನಿರ್ವಹಣಾ ಕೇಂದ್ರ) ಪ್ಯಾಕೇಜಿಂಗ್ ವಿಭಾಗದಲ್ಲಿ ‘ಬಾರ್‌ಕೋಡ್ ಮೇಕರ್’ ಆಗಿ ಕೆಲಸ ಮಾಡುತ್ತಿದ್ದನು.
ಚರ್ಚ್‌ಗೇಟ್‌ನಿಂದ ನಾಲಸೋಪಾರ ಕಡೆಗೆ ಹೋಗುತ್ತಿದ್ದ ವೇಗದ ಲೋಕಲ್ ಟ್ರೈನ್‌ನಲ್ಲಿ ಭಾರಿ ಮಳೆಯ ಕಾರಣ ಡಬ್ಬದ ಬಾಗಿಲು ಮುಚ್ಚುವ ವಿಚಾರವಾಗಿ ಮಯಂಕ್ ಮತ್ತು ರೋಷನ್ ನಡುವೆ ತೀವ್ರ ಜಗಳ ನಡೆದಿತ್ತು. ಮಳೆಯ ನೀರು ಒಳಗೆ ಬರುತ್ತಿದ್ದರಿಂದ ಮಯಂಕ್ ಬಾಗಿಲು ಮುಚ್ಚಲು ಬಯಸಿದ್ದ, ಆದರೆ ರೋಷನ್ ಅದಕ್ಕೆ ಒಪ್ಪದೆ ಗಲಾಟೆ ಮಾಡಿದ್ದನು. ಸಹ-ಪ್ರಯಾಣಿಕರು ಇಬ್ಬರನ್ನೂ ಸಮಾಧಾನಪಡಿಸಿ ಬೇರೆ ಬೇರೆ ಕಡೆ ನಿಲ್ಲಿಸಿದ್ದರು. ಆದರೆ ಇದರಿಂದ ತನಗೆ ಅಪಮಾನವಾಗಿದೆ ಎಂದು ಸಿಟ್ಟಿಗೆದ್ದ ರೋಷನ್, ಗೋರೆಗಾಂವ್ ಮತ್ತು ಮಲಾಡ್ ನಿಲ್ದಾಣಗಳ ಮಧ್ಯೆ ತನ್ನ ಬ್ಯಾಗ್‌ನಿಂದ ದೊಡ್ಡ ಚಾಕು ತೆಗೆದು ಮಯಂಕ್‌ನ ಎದೆ ಹಾಗೂ ಹೊಟ್ಟೆಯ ಭಾಗಕ್ಕೆ ಮನಸೋಇಚ್ಛೆ ಇರಿದಿದ್ದನು. ತದನಂತರ ರೈಲು ಬೊರಿವಲಿ ನಿಲ್ದಾಣಕ್ಕೆ ಬರುತ್ತಿದ್ದಂತೆ ರೈಲಿನಿಂದ ಜಿಗಿದು ಪರಾರಿಯಾಗಿದ್ದನು. ತೀವ್ರವಾಗಿ ಗಾಯಗೊಂಡಿದ್ದ ಮಯಂಕ್ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದನು.
ಕೊಲೆಯ ನಂತರ ಆರೋಪಿ ತಲೆಮರೆಸಿಕೊಂಡಿದ್ದರಿಂದ ಬೊರಿವಲಿ ಜಿಆರ್‌ಪಿ ಪೊಲೀಸರು ತನಿಖೆಗಾಗಿ 7 ವಿಶೇಷ ತಂಡಗಳನ್ನು ರಚಿಸಿದ್ದರು. ಚರ್ಚ್‌ಗೇಟ್‌ನಿಂದ ನಾಲಸೋಪಾರವರೆಗಿನ ರೈಲ್ವೆ ನಿಲ್ದಾಣಗಳು ಮತ್ತು ಸುತ್ತಮುತ್ತಲಿನ ಸುಮಾರು 400ಕ್ಕೂ ಹೆಚ್ಚು ಸಿಸಿಟಿವಿ (CCTV) ದೃಶ್ಯಾವಳಿಗಳನ್ನು ಪೊಲೀಸರು ಜಾಲಾಡಿದ್ದರು.
ಈ ಹುಡುಕಾಟದ ವೇಳೆ, ಬೊರಿವಲಿ ನಿಲ್ದಾಣದಿಂದ ಹೊರಗೆ ಓಡುತ್ತಿದ್ದ ಆರೋಪಿಯ ಸ್ಪಷ್ಟ ಚಿತ್ರಣ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಆತ ಧರಿಸಿದ್ದ ಟಿ-ಶರ್ಟ್ ಮೇಲೆ ಆತ ಕೆಲಸ ಮಾಡುತ್ತಿದ್ದ ಕಾರ್ಗೋ ಕಂಪನಿಯ ಅಧಿಕೃತ ಲೋಗೋ ಮುದ್ರಿತವಾಗಿತ್ತು. ಇದೇ ಪೊಲೀಸರಿಗೆ ಸಿಕ್ಕ ಮೊದಲ ಪ್ರಮುಖ ಸುಳಿವು.
ತಕ್ಷಣವೇ ಕಾರ್ಯಪ್ರವೃತ್ತರಾದ ಪೊಲೀಸರು ಆ ಲೋಗೋ ಆಧಾರದ ಮೇಲೆ ಅಂಧೇರಿಯಲ್ಲಿರುವ ನಿರ್ದಿಷ್ಟ ಕಾರ್ಗೋ ಕಂಪನಿಯನ್ನು ಪತ್ತೆಹಚ್ಚಿ, ಅಲ್ಲಿಗೆ ಭೇಟಿ ನೀಡಿದರು. ಕಂಪನಿಯ ಅಧಿಕಾರಿಗಳ ನೆರವಿನಿಂದ ಟಿ-ಶರ್ಟ್ ಧರಿಸಿದ್ದ ವ್ಯಕ್ತಿ ರೋಷನ್ ಸುವರ್ಣ ಎಂಬುದನ್ನು ಖಚಿತಪಡಿಸಿಕೊಂಡು, ಆತನ ಮೊಬೈಲ್ ಸಂಖ್ಯೆ ಮತ್ತು ಮನೆಯ ವಿಳಾಸವನ್ನು ಪಡೆದುಕೊಂಡರು. ತಾಂತ್ರಿಕ ಕಣ್ಗಾವಲು (Technical Surveillance) ಮತ್ತು ಮೊಬೈಲ್ ಲೋಕೇಶನ್ ಟ್ರ್ಯಾಕ್ ಮಾಡಿದಾಗ ಆತ ಮುಂಬೈನಿಂದ ತಪ್ಪಿಸಿಕೊಂಡು ತನ್ನ ತವರೂರಾದ ಮಂಗಳೂರಿಗೆ ಓಡಿಹೋಗಲು ಪ್ಲಾನ್ ಮಾಡಿರುವುದು ತಿಳಿಯಿತು. ಅದಾಗಲೇ ಮೀರಾ ರೋಡ್‌ನ ತನ್ನ ಮನೆಗೆ ಹೋಗಿ ಬಟ್ಟೆಗಳನ್ನು ಪ್ಯಾಕ್ ಮಾಡಿಕೊಂಡು ಪನ್ವೇಲ್‌ಗೆ ತಲುಪಿದ್ದ ರೋಷನ್‌ನನ್ನು, ಆತ ಮಂಗಳೂರು ಬಸ್ ಹತ್ತುವ ಮುನ್ನವೇ ಪೊಲೀಸರು ಪನ್ವೇಲ್ ರೈಲ್ವೆ ನಿಲ್ದಾಣದಲ್ಲಿ ಸುತ್ತುವರಿದು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.



Related posts

ಪಾಲ್ಘರ್ ತಾಲೂಕು ಹೋಟೆಲ್ ಓನರ್ಸ್ ಅಸೋಸಿಯೇಶನ್ ವತಿಯಿಂದ ಶ್ರೀ ರಾಮ ಪ್ರಸಾದ ವಿತರಣೆ

Mumbai News Desk

ದುಬೈನಲ್ಲಿ 21 ನೇ ವರ್ಷದ ವಾರ್ಷಿಕೋತ್ಸವವನ್ನು ಆಚರಿಸಿದ ತೀಯಾ ಸಮಾಜ ಫ್ಯಾಮಿಲಿ.

Mumbai News Desk

ಕರಾವಳಿಯ ಬಹುಮುಖ ಪ್ರತಿಭೆಯ ಸಂಘಟಕ, ಹೋರಾಟಗಾರ, ಮೀನುಗಾರ ಮುಖಂಡ ರಾಮಚಂದ್ರ ಬೈಕಂಪಾಡಿ ನಿಧನ

Mumbai News Desk

ದಕ್ಷಿಣ ಕನ್ನಡ ಜಿಲ್ಲಾ ಮೂಲ್ಯರ ಯಾನೆ ಕುಲಾಲರ ಮಾತೃ ಸಂಘದ ಅಧ್ಯಕ್ಷರಾಗಿ ಮಯೂರ್ ಉಳ್ಳಾಲ್ ಆಯ್ಕೆ

Mumbai News Desk

ಪ್ರತಿಷ್ಠಿತ ಬೂಖರ್ ಪ್ರಶಸ್ತಿ ಮೂಡಿಗಿರಿಸಿಕೊಂಡ ಸಾಹಿತಿ ಬಾನು ಮುಷ್ತಾಕ್ : ಕನ್ನಡದ ಮೊಟ್ಟ ಮೊದಲ ಕೃತಿಗೆ ಪ್ರಶಸ್ತಿ ಗರಿ

Mumbai News Desk

ಉಡುಪಿ : ಪಾಕಿಸ್ತಾನ ಪರ ಬೇಹುಗಾರಿಕೆ ಮಾಡುತಿದ್ದ ಇಬ್ಬರ ಬಂಧನ

Mumbai News Desk