28.7 C
Mumbai
June 30, 2026
Mumbai News Kannada
ಸುದ್ದಿ

ಜಾಗತಿಕ, ರಾಷ್ಟ್ರೀಯ, ರಾಜ್ಯ ಮತ್ತು ಮುಂಬೈ, ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯ ಇಂದಿನ (30/06/26)ಪ್ರಮುಖ ವಿದ್ಯಮಾನಗಳ ಸಂಕ್ಷಿಪ್ತ ಸುದ್ದಿ ಸಂಕಲನ





ವಿಶ್ವ ಸುದ್ದಿ :

  • ಅಮೆರಿಕ ಮತ್ತು ಇರಾನ್ ನಡುವಿನ ರಾಜತಾಂತ್ರಿಕ ಸಂಘರ್ಷ ತೀವ್ರ ಕುತೂಹಲ ಕೆರಳಿಸಿದೆ. ಕಳೆದ ವಾರ ಉಭಯ ದೇಶಗಳ ನಡುವೆ ನಡೆದ ಪರಸ್ಪರ ಕ್ಷಿಪಣಿ ದಾಳಿಗಳ ಬೆನ್ನಲ್ಲೇ, ಇರಾನ್ ಕತಾರ್‌ನ ದೋಹಾದಲ್ಲಿ ಮಾತುಕತೆಗೆ ವಿನಂತಿಸಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿಕೆ ನೀಡಿದ್ದಾರೆ. ಆದರೆ ಇರಾನ್ ವಿದೇಶಾಂಗ ಸಚಿವಾಲಯವು ಈ ಹಕ್ಕುಗಳನ್ನು ತಳ್ಳಿಹಾಕಿದ್ದು, ಅಮೆರಿಕ ಜೊತೆ ಸದ್ಯಕ್ಕೆ ಯಾವುದೇ ನೇರ ಮಾತುಕತೆಯ ಯೋಜನೆ ಇಲ್ಲ ಎಂದು ಸ್ಪಷ್ಟಪಡಿಸಿದೆ. ಆದಾಗ್ಯೂ, ಅಮೆರಿಕದಿಂದ ಸ್ಥಗಿತಗೊಂಡಿರುವ ಇರಾನ್ ನಿಧಿಯ ಬಿಡುಗಡೆಗೆ ಸಂಬಂಧಿಸಿದಂತೆ ಚರ್ಚಿಸಲು ತನ್ನ ತಜ್ಞರ ನಿಯೋಗವನ್ನು ದೋಹಾಕ್ಕೆ ಕಳುಹಿಸುವುದಾಗಿ ಇರಾನ್ ತಿಳಿಸಿದೆ.
  • ಗಾಜಾ ಪಟ್ಟಿಯಲ್ಲಿ ಇಸ್ರೇಲ್ ಪಡೆಗಳು ನಡೆಸಿದ ದಾಳಿಯಲ್ಲಿ ಕನಿಷ್ಠ ಎಂಟು ಮಂದಿ ಪ್ಯಾಲೆಸ್ತೀನಿಯರು ಸಾವನ್ನಪ್ಪಿದ್ದು, ಲೆಬನಾನ್ ಗಡಿಯಲ್ಲಿ ಕದನ ವಿರಾಮ ಒಪ್ಪಂದ ಜಾರಿಯಲ್ಲಿದ್ದರೂ ದಕ್ಷಿಣ ಭಾಗದಲ್ಲಿ ಮತ್ತೆ ಉದ್ವಿಗ್ನತೆ ಹೆಚ್ಚಾಗಿದೆ.
  • ಯುರೋಪ್ ಖಂಡದಲ್ಲಿ ಸದ್ಯ ವರದಿಯಾಗುತ್ತಿರುವ ಭೀಕರ ಬಿಸಿಗಾಳಿ ಮತ್ತು ತಾಪಮಾನ ಏರಿಕೆ ಜಾಗತಿಕವಾಗಿ ತೀವ್ರ ಆತಂಕಕ್ಕೆ ಕಾರಣವಾಗಿದೆ. ಜೂನ್ ಕೊನೆಯ ವಾರದಿಂದೀಚೆಗೆ ವಿಪರೀತ ಶಾಖದ ಅಲೆಗಳಿಗೆ ಯುರೋಪಿನಾದ್ಯಂತ 1,300 ಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಮತ್ತು ವಿಶ್ವ ಹವಾಮಾನ ಸಂಸ್ಥೆ ಕಳವಳ ವ್ಯಕ್ತಪಡಿಸಿವೆ. ಹಂಗೇರಿ, ಪೋಲೆಂಡ್, ಆಸ್ಟ್ರಿಯಾ ಮತ್ತು ಜೆಕ್ ಗಣರಾಜ್ಯ ಸೇರಿದಂತೆ ಹಲವು ಐರೋಪ್ಯ ದೇಶಗಳಲ್ಲಿ ತಾಪಮಾನವು ದಾಖಲೆಯ 40 ಡಿಗ್ರಿ ಸೆಲ್ಸಿಯಸ್ ದಾಟಿದ್ದು, ಹವಾಮಾನ ಇಲಾಖೆಗಳು ರೆಡ್ ಅಲರ್ಟ್ ಘೋಷಿಸಿವೆ. ಭೀಕರ ಒಣ ಹವೆ ಮತ್ತು ಬರಗಾಲದ ನಡುವೆ ಫ್ರಾನ್ಸ್ ಹಾಗೂ ಬಾಲ್ಕನ್ ಪ್ರದೇಶಗಳಲ್ಲಿ ವ್ಯಾಪಕ ಕಾಡ್ಗಿಚ್ಚು ಹರಡುತ್ತಿದ್ದು, ಸಾರ್ವಜನಿಕರ ಆರೋಗ್ಯ ಮತ್ತು ಇಂಧನ ಮೂಲಸೌಕರ್ಯಗಳ ಮೇಲೆ ತೀವ್ರ ಪರಿಣಾಮ ಬೀರಿದೆ.
  • ಅಂತಾರಾಷ್ಟ್ರೀಯ ಕ್ರೀಡಾ ರಂಗದಲ್ಲಿ 2026 ರ ಫಿಫಾ ವಿಶ್ವಕಪ್ ಫುಟ್‌ಬಾಲ್ ಟೂರ್ನಿಯು ಅತ್ಯಂತ ರೋಚಕ ಹಂತಕ್ಕೆ ತಲುಪಿದೆ. ಇಂದು ನಾಕೌಟ್ ಹಂತದ (ರೌಂಡ್ ಆಫ್ 32) ಪ್ರಮುಖ ಪಂದ್ಯಗಳು ನಡೆಯಲಿದ್ದು, ಐವರಿ ಕೋಸ್ಟ್ ಮತ್ತು ನಾರ್ವೆ, ಫ್ರಾನ್ಸ್ ಮತ್ತು ಸ್ವೀಡನ್ ಹಾಗೂ ಮೆಕ್ಸಿಕೊ ಮತ್ತು ಈಕ್ವೆಡಾರ್ ತಂಡಗಳು ಮುಖಾಮುಖಿಯಾಗಲಿವೆ. ನಿನ್ನೆ ನಡೆದ ತೀವ್ರ ಪೈಪೋಟಿಯ ಪಂದ್ಯದಲ್ಲಿ ಬ್ರೆಜಿಲ್ ತಂಡವು ಜಪಾನ್ ವಿರುದ್ಧ 2-1 ಗೋಲುಗಳ ಅಂತರದಿಂದ ಜಯಗಳಿಸಿ ಪ್ರೀ-ಕ್ವಾರ್ಟರ್ ಫೈನಲ್ ಹಂತಕ್ಕೆ ಪ್ರವೇಶ ಗಿಟ್ಟಿಸಿಕೊಂಡಿದೆ. ಪಂದ್ಯದ ಕೊನೆಯ ಕ್ಷಣಗಳಲ್ಲಿ ಗೇಬ್ರಿಯಲ್ ಮಾರ್ಟಿನೆಲ್ಲಿ ಬಾರಿಸಿದ ನಿರ್ಣಾಯಕ ಗೋಲು ಬ್ರೆಜಿಲ್ ತಂಡದ ಗೆಲುವಿಗೆ ಕಾರಣವಾಯಿತು.

ದೇಶ :

  • ಜುಲೈ 1 ರಿಂದ ಜಾರಿಗೆ ಬರುವಂತೆ ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಮಾರಾಟದ ಮೇಲಿದ್ದ ಎಲ್ಲಾ ರೀತಿಯ ಮಿತಿ ಹಾಗೂ ನಿಯಂತ್ರಣಗಳನ್ನು ಕೇಂದ್ರ ಸರ್ಕಾರ ಸಂಪೂರ್ಣವಾಗಿ ಹಿಂಪಡೆದಿದೆ. ಇದರಿಂದಾಗಿ ಇಂಧನ ಪೂರೈಕೆಯ ಪರಿಸ್ಥಿತಿ ತಿಳಿಯಾಗಲಿದ್ದು, ಕೈಗಾರಿಕಾ ಗ್ರಾಹಕರಿಗೆ ದೊಡ್ಡ ರಿಲೀಫ್ ಸಿಕ್ಕಂತಾಗಿದೆ.
  • ಭಾರತ ಮತ್ತು ಅಮೆರಿಕ ನಡುವಿನ ದ್ವಿಪಕ್ಷೀಯ ವ್ಯಾಪಾರ ಒಪ್ಪಂದದ ಮಾತುಕತೆಗಳು ಕೊನೆಯ ಹಂತ ತಲುಪಿದ್ದು, ಶೇಕಡಾ 99 ರಷ್ಟು ಪ್ರಕ್ರಿಯೆ ಪೂರ್ಣಗೊಂಡಿದೆ ಎಂದು ಭಾರತದಲ್ಲಿನ ಅಮೆರಿಕ ರಾಯಭಾರಿ ಸರ್ಜಿಯೋ ಗೋರ್ ತಿಳಿಸಿದ್ದಾರೆ. ಮುಂಬರುವ ದಿನಗಳಲ್ಲಿ ಈ ಒಪ್ಪಂದ ಅಧಿಕೃತವಾಗಿ ಮುದ್ರೆ ಬೀಳುವ ಸಾಧ್ಯತೆಯಿದೆ.
  • ಅಫ್ಘಾನಿಸ್ತಾನದ ಭೂಪ್ರದೇಶದ ಮೇಲೆ ಪಾಕಿಸ್ತಾನ ಇತ್ತೀಚೆಗೆ ನಡೆಸಿದ ವೈಮಾನಿಕ ದಾಳಿಯನ್ನು ಭಾರತ ತೀವ್ರವಾಗಿ ಖಂಡಿಸಿದೆ. ಇದು ಪ್ರಾದೇಶಿಕ ಶಾಂತಿ ಮತ್ತು ಸ್ಥಿರತೆಗೆ ನೇರ ಭೀತಿಯಾಗಿದ್ದು, ತನ್ನ ಆಂತರಿಕ ವೈಫಲ್ಯಗಳನ್ನು ಮುಚ್ಚಿಕೊಳ್ಳಲು ಪಾಕಿಸ್ತಾನ ಇಂತಹ ಬೇಜವಾಬ್ದಾರಿ ಕ್ರಮಕ್ಕೆ ಮುಂದಾಗಿದೆ ಎಂದು ವಿದೇಶಾಂಗ ಸಚಿವಾಲಯ ಹೇಳಿದೆ.
  • ಮಾಜಿ ಹಣಕಾಸು ಕಾರ್ಯದರ್ಶಿ ರಾಜೀವ್ ಕುಮಾರ್ ಅವರನ್ನು ಎಚ್‌ಡಿಎಫ್‌ಸಿ (HDFC) ಬ್ಯಾಂಕ್‌ನ ಪಾರ್ಟ್-ಟೈಮ್ ಸ್ವತಂತ್ರ ಅಧ್ಯಕ್ಷರನ್ನಾಗಿ ನಾಲ್ಕು ವರ್ಷಗಳ ಅವಧಿಗೆ ನೇಮಕ ಮಾಡಲು ಬ್ಯಾಂಕ್‌ನ ಆಡಳಿತ ಮಂಡಳಿ ಅನುಮೋದನೆ ನೀಡಿದೆ. ಜೂನ್ 30 ರಿಂದಲೇ ಈ ನೇಮಕಾತಿ ಜಾರಿಗೆ ಬರಲಿದೆ.
  • ಪಶ್ಚಿಮ ಬಂಗಾಳದಲ್ಲಿ ಏಕರೂಪ ನಾಗರಿಕ ಸಂಹಿತೆ (UCC) ಜಾರಿಗೆ ತರಲು ಆಗಸ್ಟ್ ತಿಂಗಳಿನಲ್ಲಿ ವಿಧಾನಸಭೆಯಲ್ಲಿ ಹೊಸ ಮಸೂದೆಯನ್ನು ಮಂಡಿಸಲಾಗುವುದು ಎಂದು ಪಶ್ಚಿಮ ಬಂಗಾಳದ ಪ್ರತಿಪಕ್ಷ ನಾಯಕ ಸುವೇಂದು ಅಧಿಕಾರಿ ತಿಳಿಸಿದ್ದಾರೆ. ಜುಲೈ 2 ರಂದು ರಾಜ್ಯ ಸಚಿವ ಸಂಪುಟ ಇದಕ್ಕೆ ತಾತ್ವಿಕ ಅನುಮೋದನೆ ನೀಡುವ ಸಾಧ್ಯತೆಯಿದೆ.
  • ಇರಾನ್‌ನ ಸರ್ವೋಚ್ಚ ನಾಯಕ ಆಯತೊಲ್ಲಾ ಅಲಿ ಖಮೇನಿ ಅವರ ಅಂತ್ಯಕ್ರಿಯೆಯಲ್ಲಿ ಭಾರತವನ್ನು ಪ್ರತಿನಿಧಿಸಲು ಬಿಹಾರದ ರಾಜ್ಯಪಾಲ ಸೈಯದ್ ಅತಾ ಹಸ್ನೈನ್ ಮತ್ತು ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ಪಬಿತ್ರಾ ಮಾರ್ಗರಿಟಾ ನೇತೃತ್ವದ ಅಧಿಕೃತ ನಿಯೋಗ ಇರಾನ್‌ಗೆ ತೆರಳಲಿದೆ.

ಕರ್ನಾಟಕ :

  • ರಾಜ್ಯದಲ್ಲಿ ಮುಂಗಾರು ಮಳೆ ಅಬ್ಬರ ಜೋರಾಗಿದ್ದು, ಕರಾವಳಿ ಭಾಗದಲ್ಲಿ ಮಳೆಯ ತೀವ್ರತೆ ಹೆಚ್ಚಾಗಿದೆ. ಹವಾಮಾನ ಇಲಾಖೆಯು ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಧಾರವಾಡ ಮತ್ತು ಚಿಕ್ಕಮಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಮುನ್ಸೂಚನೆ ನೀಡಿದ್ದು, ಜುಲೈ 6ರ ತನಕ ಕರಾವಳಿ ಭಾಗಕ್ಕೆ ‘ಆರೆಂಜ್ ಅಲರ್ಟ್’ ಘೋಷಿಸಿದೆ. ಚಿಕ್ಕಮಗಳೂರಿನ ಶೃಂಗೇರಿ ಮತ್ತು ಕೆರೆಕಟ್ಟೆ ಪರಿಸರದಲ್ಲಿ ನಿರಂತರ ಮಳೆಯಾಗುತ್ತಿರುವುದರಿಂದ ತುಂಗಾ ನದಿಯ ನೀರಿನ ಮಟ್ಟದಲ್ಲಿ ಗಣನೀಯ ಏರಿಕೆಯಾಗಿದೆ.
  • ಕರ್ನಾಟಕದಲ್ಲಿ ಇಂದಿನಿಂದ (ಜೂನ್ 30) ಮನೆ ಮನೆಗೆ ತೆರಳಿ ಮತದಾರರ ಗಣತಿ (SIR) ಪ್ರಕ್ರಿಯೆ ಆರಂಭವಾಗಿದೆ. ಬೂತ್ ಮಟ್ಟದ ಅಧಿಕಾರಿಗಳು (BLO) ಪ್ರತಿಯೊಬ್ಬ ಮತದಾರರ ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ. ಸಾರ್ವಜನಿಕರು ತಮ್ಮ ಅಗತ್ಯ ದಾಖಲೆಗಳನ್ನು ಸಿದ್ಧವಾಗಿಟ್ಟುಕೊಳ್ಳುವಂತೆ ಸೂಚಿಸಲಾಗಿದ್ದು, ಭರ್ತಿ ಮಾಡಿದ ನಮೂನೆಗಳನ್ನು ಜುಲೈ 29ರ ಒಳಗೆ ಸಲ್ಲಿಸಬೇಕಾಗಿದೆ. ಈ ಪ್ರಕ್ರಿಯೆಯ ನಂತರ ಆಗಸ್ಟ್ 5ರಂದು ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
  • ಗೋವಾದಲ್ಲಿ ದಶಕಗಳಿಂದ ಕಾರ್ಯನಿರ್ವಹಿಸುತ್ತಿರುವ ಕನ್ನಡ ಮಾಧ್ಯಮ ಶಾಲೆಗಳನ್ನು ರಾಷ್ಟ್ರೀಯ ಶಿಕ್ಷಣ ನೀತಿಯ (NEP) ನೆಪದಲ್ಲಿ ಮುಚ್ಚಲು ಅಲ್ಲಿನ ಸರ್ಕಾರ ಮುಂದಾಗಿದೆ ಎಂಬ ಆರೋಪ ಕೇಳಿಬಂದಿದೆ. ಈ ಕುರಿತು ಕನ್ನಡ ಅಭಿವೃದ್ಧಿ ಪ್ರಾಧಿಕಾರದ (KDA) ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಅವರು ತೀವ್ರ ಕಳವಳ ವ್ಯಕ್ತಪಡಿಸಿದ್ದು, ತಕ್ಷಣವೇ ಮಧ್ಯಪ್ರವೇಶಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೇಂದ್ರ ಶಿಕ್ಷಣ ಸಚಿವರಿಗೆ ಪತ್ರ ಬರೆದಿದ್ದಾರೆ. ಅಲ್ಲದೆ ಗೋವಾ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಲು ಕರ್ನಾಟಕದಿಂದ ಹಿರಿಯ ಸಚಿವರ ನಿಯೋಗವನ್ನು ಕಳುಹಿಸುವಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದಾರೆ.
  • ನ್ಯಾಯಾಲಯದ ಆದೇಶವೊಂದರಲ್ಲಿ, ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪನ್ನು ನೀಡಿದ್ದು, ಪತಿಗಿಂತ ಹೆಚ್ಚು ಗಳಿಸುವ ಅಥವಾ ಸ್ವಾವಲಂಬಿಯಾಗಿರುವ ಪತ್ನಿಯು ಪತಿಯಿಂದ ಜೀವನಾಂಶ ಪಡೆಯಲು ಅರ್ಹಳಲ್ಲ ಎಂದು ಸ್ಪಷ್ಟಪಡಿಸಿದೆ.
  • ಚಾಮರಾಜನಗರದಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಚಲಿಸುತ್ತಿದ್ದ ವಾಹನವೊಂದರ ಟೈರ್ ಸ್ಫೋಟಗೊಂಡು ಪಲ್ಟಿಯಾದ ಪರಿಣಾಮ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಸುಮಾರು 50ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ದುರದೃಷ್ಟಕರ ಘಟನೆ ವರದಿಯಾಗಿದೆ.
  • ಬಿಡದಿ ಟೌನ್‌ಶಿಪ್ ವಿಚಾರದಲ್ಲಿ ಕಾಂಗೆಸ್ ಹಾಗೂ ಜೆಡಿಎಸ್ ನಾಯಕರ ನಡುವೆ ವಾಕ್ಸಮರ ಮುಂದುವರಿದಿದೆ.

ಮುಂಬೈ :

  • ಮುಂಬೈ ಮತ್ತು ಅದರಉಪನಗರಗಳಲ್ಲಿ ಮುಂಗಾರು ಮಳೆ ಚುರುಕಾಗಿದ್ದು, ಮುಂಬೈ ಮಹಾನಗರ ಪಾಲಿಕೆ (BMC) ಹವಾಮಾನ ಕೇಂದ್ರಗಳ ಪ್ರಕಾರ, ಪಶ್ಚಿಮ ಮತ್ತು ಪೂರ್ವ ಉಪನಗರಗಳಲ್ಲಿ ಅತ್ಯಧಿಕ ಮಳೆ ದಾಖಲಾಗಿದ್ದು, ಜನಜೀವನ ಸ್ವಲ್ಪಮಟ್ಟಿಗೆ ಅಸ್ತವ್ಯಸ್ತಗೊಂಡಿದೆ .
  • ಮುಂಬೈನ ಪ್ರಸಿದ್ಧ ಹೋಟೆಲ್‌ಗಳು ಮತ್ತು ಬೇಕರಿಗಳ ಮೇಲೆ ಹಿರಿಯ ಅಧಿಕಾರಿ ತುಕಾರಾಂ ಮುಂಢೆ ಅವರ ನೇತೃತ್ವದಲ್ಲಿ ಭಾರಿ ದಾಳಿ ನಡೆಸಲಾಗಿದೆ. ಅಡುಗೆಮನೆಯಲ್ಲಿ ಅಶುಚಿತ್ವ, ಇಲಿಗಳ ಕಾಟ ಮತ್ತು ಅವಧಿ ಮುಗಿದ ಆಹಾರ ಪದಾರ್ಥಗಳನ್ನು ಬಳಸುತ್ತಿದ್ದ ಮುಂಬೈನ 6 ಪ್ರಮುಖ ಹೋಟೆಲ್‌ಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗಿದೆ. ಈ ಹಿನ್ನೆಲೆಯಲ್ಲಿ ಆಹಾರ ಸುರಕ್ಷತಾ ಅಧಿಕಾರಿಗಳು ರಜೆ ದಿನಗಳಲ್ಲೂ ಸಕ್ರಿಯರಾಗಿ ತಪಾಸಣೆ ನಡೆಸುತ್ತಿದ್ದಾರೆ.
  • ಮುಂಬೈನ ಗಿರ್ಗಾಂವ್ ಪ್ರದೇಶದಲ್ಲಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಹೈಪ್ರೊಫೈಲ್ ಸೆಕ್ಸ್ ದಂಧೆಯ ಜಾಲವನ್ನು ಭೇದಿಸಿದ್ದಾರೆ. ಈ ದಾಳಿಯ ವೇಳೆ ಖ್ಯಾತ ಮರಾಠಿ ನಟಿಯೊಬ್ಬರನ್ನು ರಕ್ಷಿಸಲಾಗಿದ್ದು, ದಂಧೆಯಲ್ಲಿ ಭಾಗಿಯಾಗಿದ್ದ ಮೇಕಪ್ ಆರ್ಟಿಸ್ಟ್ ಒಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.
  • ಕೇಂದ್ರ ಸರ್ಕಾರವು ಜುಲೈ 1 ರಿಂದ ಪೆಟ್ರೋಲ್ ಮತ್ತು ಡೀಸೆಲ್ ಮಾರಾಟದ ಮೇಲಿದ್ದ ಎಲ್ಲಾ ನಿರ್ಬಂಧಗಳನ್ನು ಹಿಂತೆಗೆದುಕೊಳ್ಳುವುದಾಗಿ ಘೋಷಿಸಿದೆ. ಪಶ್ಚಿಮ ಏಷ್ಯಾ ಬಿಕ್ಕಟ್ಟು ತಿಳಿಗೊಂಡ ಹಿನ್ನೆಲೆಯಲ್ಲಿ ದೇಶಾದ್ಯಂತ ಹಾಗೂ ಮುಂಬೈನಲ್ಲಿ ಗೃಹಬಳಕೆಯ ಎಲ್‌ಪಿಜಿ, ಸಿಎನ್‌ಜಿ ಮತ್ತು ಪಿಎನ್‌ಜಿ ಪೂರೈಕೆ ಸಂಪೂರ್ಣ ಸ್ಥಿರವಾಗಿದೆ ಮತ್ತು ಹೋಟೆಲ್ ಹಾಗೂ ಉದ್ಯಮಗಳಿಗೆ ಎಂದಿನಂತೆ ಪೂರೈಕೆ ಮಾಡಲಾಗುತ್ತಿದೆ ಎಂದು ಪೆಟ್ರೋಲಿಯಂ ಸಚಿವಾಲಯ ತಿಳಿಸಿದೆ.
  • ಮಹಾರಾಷ್ಟ್ರ ವಿಧಾನ ಪರಿಷತ್ತಿನ ಉಪಸಭಾಪತಿ ಚುನಾವಣೆ ಬುಧವಾರ ನಡೆಯಲಿದ್ದು, ಸದ್ಯ ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿದೆ. ಹಾಲಿ ಉಪಸಭಾಪತಿ ನೀಲಂ ಗೋರ್ಹೆ ಅವರಿಗೆ ಮತ್ತೊಮ್ಮೆ ಅವಕಾಶ ಸಿಗಲಿದೆಯೇ ಅಥವಾ ಹೊಸ ಮುಖಕ್ಕೆ ಮನ್ನಣೆ ಸಿಗಲಿದೆಯೇ ಎಂಬ ಚರ್ಚೆಗಳು ಮುಂಬೈನ ರಾಜಕೀಯ ಕಾರಿಡಾರ್‌ನಲ್ಲಿ ಜೋರಾಗಿವೆ.

ಉಡುಪಿ :

  • ಕರಾವಳಿ ಭಾಗದಲ್ಲಿ ಮುಂಗಾರು ಮಳೆ ಮತ್ತೆ ಚುರುಕುಗೊಂಡಿದ್ದು, ಭಾರತೀಯ ಹವಾಮಾನ ಇಲಾಖೆ (IMD) ಉಡುಪಿ ಜಿಲ್ಲೆಯಲ್ಲಿ ಜುಲೈ 6ರವರೆಗೆ ‘ಆರೆಂಜ್ ಅಲರ್ಟ್’ ಘೋಷಿಸಿದೆ. ಇಂದು ಜಿಲ್ಲೆಯಾದ್ಯಂತ ಭಾರಿ ಮಳೆಯಾಗುವ ಮುನ್ಸೂಚನೆ ಇದ್ದು, ಜನನಿಬಿಡ ಪ್ರದೇಶಗಳಲ್ಲಿ ಮುನ್ನೆಚ್ಚರಿಕೆ ವಹಿಸಲು ಜಿಲ್ಲಾಡಳಿತ ಸೂಚಿಸಿದೆ. ಯಾವುದೇ ತುರ್ತು ಪರಿಸ್ಥಿತಿಗೆ ನೆರವಾಗಲು ಜಿಲ್ಲಾ ವಿಪತ್ತು ನಿರ್ವಹಣಾ ಘಟಕದ ಉಚಿತ ಸಹಾಯವಾಣಿ ಸಂಖ್ಯೆ 1077 ಮತ್ತು 0820-2574802 ಅನ್ನು ಸಾರ್ವಜನಿಕರ ಬಳಕೆಗೆ ಮುಕ್ತವಾಗಿಡಲಾಗಿದೆ.
  • ಜಿಲ್ಲೆಯಲ್ಲಿ ಮಳೆ ಕೊರತೆ ಎದುರಾಗಿದ್ದ ಹಿನ್ನೆಲೆಯಲ್ಲಿ ಬಾರ್ಕೂರಿನ ಐತಿಹಾಸಿಕ ಕೋಟೆಕೇರಿ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಇತ್ತೀಚೆಗೆ ಮಳೆಗಾಗಿ ವಿಶೇಷ ಪ್ರಾರ್ಥನೆ ಹಾಗೂ 365 ಎಳನೀರಿನ ಅಭಿಷೇಕವನ್ನು ನೆರವೇರಿಸಲಾಗಿತ್ತು. ಈ ವಿಶೇಷ ಪೂಜೆಯ ಬೆನ್ನಲ್ಲೇ ಬಾರ್ಕೂರು ಮತ್ತು ಸುತ್ತಮುತ್ತಲಿನ ಪರಿಸರದಲ್ಲಿ ಉತ್ತಮ ಮಳೆಯಾಗಿದ್ದು, ಕೃಷಿಕರು ಹಾಗೂ ಸ್ಥಳೀಯ ಜನರಲ್ಲಿ ಸಂತಸ ಮೂಡಿಸಿದೆ.
  • ಮುಂಗಾರು ಮಳೆಯ ಮಧ್ಯೆಯೂ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನ ಸೇರಿದಂತೆ ಜಿಲ್ಲೆಯ ಪ್ರಮುಖ ಶ್ರದ್ಧಾಕೇಂದ್ರಗಳಲ್ಲಿ ಭಕ್ತರ ದಟ್ಟಣೆ ಹೆಚ್ಚಾಗಿದೆ.
  • ಬ್ರಹ್ಮಾವರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದ ಪೇಜಾವರ ಶ್ರೀಗಳು, ಸಮಾಜ ಸೇವೆಯೇ ನಿಜವಾದ ಭಗವಂತನ ಆರಾಧನೆ ಎಂದು ಸಾರ್ವಜನಿಕರಿಗೆ ಕರೆ ನೀಡಿದ್ದಾರೆ.
  • ಸಾರ್ವಜನಿಕರ ದೂರು ಹಾಗೂ ವಿವಾದಗಳ ಶೀಘ್ರ ಇತ್ಯರ್ಥಕ್ಕಾಗಿ ಆಗಸ್ಟ್ 21 ರಿಂದ ಉಡುಪಿ ಜಿಲ್ಲಾ ನ್ಯಾಯಾಲಯದಲ್ಲಿ ವಿಶೇಷ ಲೋಕ ಅದಾಲತ್ ‘ಸಮಾಧಾನ ಸಮಾರೋಪ-2026’ ಆಯೋಜಿಸಲು ಸಿದ್ಧತೆಗಳು ನಡೆದಿವೆ.

ದಕ್ಷಿಣ ಕನ್ನಡ :

  • ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ ಮತ್ತು ಉಡುಪಿಯಲ್ಲಿ ಮುಂಗಾರು ಮಳೆ ತೀವ್ರಗೊಂಡಿದ್ದು, ಹವಾಮಾನ ಇಲಾಖೆಯು ಜುಲೈ 1 ರಿಂದ ಜುಲೈ 6 ರವರೆಗೆ ಜಿಲ್ಲೆಯಲ್ಲಿ ಭಾರಿ ಮಳೆಯಾಗುವ ಮುನ್ಸೂಚನೆಯೊಂದಿಗೆ ‘ಆರೆಂಜ್ ಅಲರ್ಟ್’ ಘೋಷಿಸಿದೆ. ಜಿಲ್ಲೆಯಾದ್ಯಂತ ಕಳೆದ 24 ಗಂಟೆಗಳಲ್ಲಿ ಸರಾಸರಿ 29.8 ಮಿಮೀ ಮಳೆಯಾಗಿದ್ದು, ಸುಳ್ಯ ಮತ್ತು ಕಡಬ ತಾಲೂಕುಗಳಲ್ಲಿ ಅತ್ಯಧಿಕ ಮಳೆ ದಾಖಲಾಗಿದೆ. ಭಾರಿ ಮಳೆಯಿಂದಾಗಿ ಉಜಿರೆ ಸಮೀಪದ ಅಂಬಾಡಬೆಟ್ಟು ತಗ್ಗು ಮಟ್ಟದ ಸೇತುವೆಯು ನೀರಿನಲ್ಲಿ ಸಂಪೂರ್ಣವಾಗಿ ಮುಳುಗಡೆಯಾಗಿದ್ದು, ಸಂಪರ್ಕ ಕಡಿತಗೊಂಡಿದೆ. ಮಳೆ ಹಾಗೂ ಬಿರುಗಾಳಿಯ ತೀವ್ರತೆಗೆ ಜಿಲ್ಲೆಯ ಹಲವೆಡೆ ವಿದ್ಯುತ್ ಕಂಬಗಳು ಮತ್ತು ಮರಗಳು ಧರೆಗುರುಳಿವೆ. ವಿಟ್ಲ ಸಮೀಪ ಚಲಿಸುತ್ತಿದ್ದ ಕಾರಿನ ಮೇಲೆ ಮರ ಮತ್ತು ವಿದ್ಯುತ್ ಕಂಬ ಬಿದ್ದಿದ್ದು, ಕಾರಿನಲ್ಲಿದ್ದ ದಂಪತಿಗಳು ಯಾವುದೇ ಅಪಾಯವಿಲ್ಲದೆ ಪವಾಡಸದೃಶವಾಗಿ ಪಾರಾಗಿದ್ದಾರೆ.
  • ದಕ್ಷಿಣ ಕನ್ನಡ ಜಿಲ್ಲೆಯ ಜೀವನಾಡಿಯಾಗಿರುವ ನೇತ್ರಾವತಿ ನದಿಯ ಮಾಲಿನ್ಯದ ಕುರಿತು ಸಾರ್ವಜನಿಕರಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿದೆ. ಉಪ್ಪಿನಂಗಡಿ ಮತ್ತು ಸುತ್ತಮುತ್ತಲಿನ ವಸತಿ ಹಾಗೂ ವಾಣಿಜ್ಯ ಸಂಕೀರ್ಣಗಳಿಂದ ರಾತ್ರೋರಾತ್ರಿ ಶೌಚಾಲಯದ ಕಲುಷಿತ ಕೊಳಚೆ ನೀರನ್ನು ನೇರವಾಗಿ ನದಿಗೆ ಹರಿಸಲಾಗುತ್ತಿದೆ ಎಂದು ಸ್ಥಳೀಯರು ಆರೋಪಿಸಿದ್ದು, ಅಧಿಕಾರಿಗಳ ಮೌನಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
  • ಬೈಕಂಪಾಡಿ ಬಳಿ ಕೇರಳ ಮೂಲದ ಉದ್ಯಮಿಯೊಬ್ಬರ ಕಾರನ್ನು ತಡೆದ ದರೋಡೆಕೋರರ ತಂಡವೊಂದು ಚಿನ್ನದ ಆಭರಣಗಳು ಮತ್ತು ಕಾರನ್ನು ದೋಚಿ ಪರಾರಿಯಾಗಿದೆ. ಈ ಕುರಿತು ಮಂಗಳೂರು ಪೊಲೀಸರು ತನಿಖೆ ಕೈಗೊಂಡಿದ್ದಾರೆ.
  • ರಾಷ್ಟ್ರೀಯ ಹೆದ್ದಾರಿ 75 ರ ಗುಂಡ್ಯ ಸಮೀಪದ ಬಾರ್ಚಿನಹಳ್ಳಿಯಲ್ಲಿ ಕಾರು ಮತ್ತು ಟ್ಯಾಂಕರ್ ಲಾರಿ ನಡುವೆ ಸಂಭವಿಸಿದ ಮುಖಾಮುಖಿ ಡಿಕ್ಕಿಯಲ್ಲಿ ಐವರು ತೀವ್ರವಾಗಿ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇಂಟರ್ನೆಟ್‌ನಲ್ಲಿ ನ್ಯಾಯಾಧೀಶರ ವಿರುದ್ಧ ಅವಹೇಳನಕಾರಿ ಪೋಸ್ಟ್ ಹಾಕಿದ ಆರೋಪದ ಮೇಲೆ ಬೆಂಗಳೂರು ಮೂಲದ ವ್ಯಕ್ತಿಯೊಬ್ಬನನ್ನು ವಿಟ್ಲ ಪೊಲೀಸರು ಬಂಧಿಸಿದ್ದಾರೆ.
  • ಮಂಗಳೂರು ನಗರಕ್ಕೆ ಶೀಘ್ರದಲ್ಲೇ 100 ಎಲೆಕ್ಟ್ರಿಕ್ (ಇವಿ) ಬಸ್‌ಗಳ ಸೇವೆ ಲಭ್ಯವಾಗಲಿದ್ದು, ಇದಕ್ಕಾಗಿ ನಗರದ ವಿವಿಧೆಡೆ ಚಾರ್ಜಿಂಗ್ ಪಾಯಿಂಟ್‌ಗಳ ನಿರ್ಮಾಣಕ್ಕೆ ಮೆಸ್ಕಾಂ ಸಂಸ್ಥೆಯು ಅಧಿಕೃತವಾಗಿ ಟೆಂಡರ್ ಆಹ್ವಾನಿಸಿದೆ.
  • ಮುಂಬೈ ಹಾಗೂ ಕರಾವಳಿ ಪ್ರಯಾಣಿಕರ ದೀರ್ಘಕಾಲದ ಬೇಡಿಕೆಯಾಗಿದ್ದ ವಸಾಯ್ ರೋಡ್ ಮಾರ್ಗವಾಗಿ ಮಂಗಳೂರು-ಬಾಂದ್ರಾ ಟರ್ಮಿನಸ್ ನಡುವೆ ಹೊಸ ರೈಲು ಸೇವೆಯನ್ನು ಆರಂಭಿಸುವ ಕುರಿತು ಸಾರಿಗೆ ಇಲಾಖೆಯಲ್ಲಿ ಚರ್ಚೆಗಳು ಮುನ್ನೆಲೆಗೆ ಬಂದಿವೆ.
    *


Related posts

ಯಕ್ಷಗಾನ ಕಲಾವಿದ, ಹಾಸ್ಯ ಚಕ್ರವರ್ತಿ, ಅರುಣ್ ಕುಮಾರ್ ಜಾರ್ಕಳಗೆ ಕುಂದೇಶ್ವರ ಸಮ್ಮಾನ್

Mumbai News Desk

ಮುಂಬೈ ರೈಲು ಪ್ರಯಾಣಿಕರ ಗಮನಕ್ಕೆ: ಮೇ 19ರವರೆಗೆ ಸಿಎಸ್‌ಎಂಟಿ ರೈಲು ಸಂಚಾರ ಸ್ಥಗಿತ; ಮಂಗಳೂರು ಸೂಪರ್‌ಫಾಸ್ಟ್ ಪ್ರಯಾಣ ಥಾಣೆಯಲ್ಲೇ ಅಂತ್ಯ

Mumbai News Desk

ಮಾದಕ ವ್ಯಸನ ವಿರೋಧಿ ಅಭಿಯಾನ – “ಜಾಗೃತಿ, ಸಂವಾದ ಮತ್ತು ಸಮಾಲೋಚನೆ”_

Mumbai News Desk

ಜೆ. ಬಿ. ನಗರ : ಸುನಂದಾ ಕೇಶವ ಶ್ರೀಯಾನ್ ನಿಧನ

Mumbai News Desk

ಕಾಂದಿವಲಿ: ಯೂನಿಯನ್ ಬ್ಯಾಂಕ್ ನಿವೃತ್ತ ಅಧಿಕಾರಿ ಕುಸುಮಲತಾ ಸುವರ್ಣ ನಿಧನ

Mumbai News Desk

ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ, ಶಿವಸೇನಾ ನೇತಾರ ಮನೋಹರ್ ಜೋಷಿ ವಿಧಿವಶ

Mumbai News Desk