
ಚೆಂಬೂರು ಕರ್ನಾಟಕ ಸಂಘವು ಪ್ರತಿವರ್ಷ ಕನ್ನಡಕ್ಕಾಗಿ ಕೆಲಸಮಾಡಿದ ತುಳು ಕನ್ನಡಿಗರಿಗೆ ಚೆಂಬೂರು ಕರ್ನಾಟಕ ಸಂಘದ ಮಾಜಿ ಅಧ್ಯಕ್ಷರು ಹಾಗೂ ನ್ಯಾಯವಾದಿ ಅರಾಟೆ ಸುಧಾಕರ ಅವರು ತಮ್ಮ ಅಜ್ಜಿಯ ಸ್ಮರಣಾರ್ಥ ಕೊಡಮಾಡುವ ಅರಾಟೆ ನಾಗಮ್ಮ ಶೇಷಪ್ಪ ಪೂಜಾರಿ ಸ್ಮಾರಕ ಪ್ರಶಸ್ತಿ ನೀಡಿ ಗೌರವಿಸುತ್ತಿದೆ. ಮಾರ್ಚ್ 29ರಂದು ಚೆಂಬೂರು ಕರ್ನಾಟಕ ಸಂಘ ಅಯೋಜಿಸಿದ ಸಾಹಿತ್ಯ ಸಹವಾಸ ಕಾರ್ಯಕ್ರಮದಲ್ಲಿ ಈ ವರ್ಷದ ಪ್ರಶಸ್ತಿಯನ್ನು ಅನಿತಾ ಪಿ. ತಾಕೊಡೆಯವರಿಗೆ ಪ್ರದಾನಿಸಲಾಯಿತು.

ಚೆಂಬೂರು ಕರ್ನಾಟಕ ಹೈಸ್ಕೂಲ್ ನ ಸಭಾಂಗಣದಲ್ಲಿ ನಡೆದ ಸಾಹಿತ್ಯ ಸಹವಾಸ ಕಾರ್ಯಕ್ರಮವು ವಿಭಿನ್ನ ರೀತಿಯಲ್ಲಿ ಸಂಯೋಜನೆಗೊಂಡಿತ್ತು. ಚೆಂಬೂರ್ ಕರ್ನಾಟಕ ಶಾಲೆಯ ವಿದ್ಯಾರ್ಥಿಗಳ ಕವಾಯತ್ತು ಪ್ರದರ್ಶನದ ಮೂಲಕ ಅತಿಥಿಗಳನ್ನು ಸ್ವಾಗತಿಸಿದ ರೀತಿ, ನೀಡಿದ ಆದರ ಆತಿಥಘಳು ವಿಶಿಷ್ಟವಾಗಿತ್ತು.

ಕಾರ್ಯಕ್ರಮದಲ್ಲಿ ಹಿರಿಯ ನ್ಯಾಯವಾದಿ, ಬಾಂಬೆ ಬಂಟ್ಸ್ ಅಸೋಸಿ ಯೇಶನ್ನ ಮಾಜಿ ಅಧ್ಯಕ್ಷ ಅಶೋಕ್ ಡಿ. ಶೆಟ್ಟಿ, ರಾಷ್ಟ್ರೀಯ ಕನ್ನಡರತ್ನ ಪ್ರಶಸ್ತಿ ಪಡೆದ ಸಮಾಜ ಸೇವಕಿ ನಿವೇದಿತಾ ಹಾವನೂರು ಹೊನ್ನಟ್ಟಿ, ಸಂಘದ ವಾರ್ಷಿಕ ವೈ.ಜಿ. ಶೆಟ್ಟಿ ಶ್ರೇಷ್ಠ ಶಿಕ್ಷಕ ಪ್ರಶಸ್ತಿಯನ್ನು ಪಡೆದ ರಾಮ ಆಚಾರ್ಯ, ನ್ಯಾಯವಾದಿ ಸುಬ್ಬಯ್ಯ ಶೆಟ್ಟಿ ದತ್ತಿ ಪುರಸ್ಕಾರವನ್ನು ಪಡೆದ ಡಾ| ಉಮಾ ರಾಮ ರಾವ್, ಚೆಂಬೂರು ಕರ್ನಾಟಕ ಸಂಘದ ಅಧ್ಯಕ್ಷ ಚಂದ್ರಕಾಂತ ಎಸ್. ನಾಯಕ್, ಗೌರವ ಕೋಶಾಧಿಕಾರಿ ಅರುಣ್ ಕುಮಾರ್ ಶೆಟ್ಟಿ, ಸಾಂಸ್ಕೃತಿಕ ಸಮಿತಿಯ ಕಾರ್ಯದರ್ಶಿ ಪ್ರಭಾಕರ ಬಿ. ಬೋಳಾರ ಮತ್ತು ಸಂಘದ ಇತರ ಪದಾಧಿಕಾರಿಗಳು ಉಪಸ್ಥಿತರಿದ್ದರು. ಶಿಕ್ಷಕಿಯರಾದ ಅರ್ಚನಾ ಪೂಜಾರಿ, ವಿಜೇತಾ ಸುವರ್ಣ, ಭಾರತಿ ಶೆಟ್ಟಿ ಅಕ್ಷತಾ ರಾವ್ ಅತಿಥಿಗಳು ಹಾಗೂ ಪ್ರಶಸ್ತಿ ವಿಜೇತರನ್ನು ಪರಿಚಯಿಸಿದರು. ಶಾಲಾ ಶಿಕ್ಷಕಿ ಶ್ಯಾಮಲಾ ಉಚ್ಚಿಲ್ ಕಾರ್ಯಕ್ರಮವನ್ನು ನಿರೂಪಿಸಿದರು. ಗೌರವ ಪ್ರಧಾನ ಕಾರ್ಯದರ್ಶಿ ವಿಶ್ವನಾಥ್ ಎಸ್. ಶೇಣದ ವಂದಿಸಿದರು.
ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಯಕ್ಷಪ್ರಿಯ ಬಳಗ ಮೀರಾ-ಭಾಯಂದರ್ ಇದರ ಉದಯೋನ್ಮುಖ ಬಾಲಕಲಾವಿದೆ ರಿಂದ ಯಕ್ಷ ಗುರು ನಾಗೇಶ್ ಪೂಳಲಿ ನಿರ್ದೇಶನದಲ್ಲಿ ಕದಂಬ ಕೌಶಿಕೆ ಎಂಬ ಕನ್ನಡ ಪೌರಾಣಿಕ ಯಕ್ಷಗಾನ ಪ್ರದರ್ಶನಗೊಂಡಿತು.




