
ಕರ್ನಾಟಕ ವಿಶ್ವಕರ್ಮ ಅಸೋಸಿಯೇಷನ್ (ರಿ), ಮುಂಬೈ ಇದರ ವತಿಯಿಂದ ಭಾಂಡುಪ್, ಕಾಂಜುರ್ ಮಾರ್ಗ, ಮುಲುಂಡ್ ಹಾಗೂ ವಿಕ್ರೋಲಿ ಪ್ರದೇಶದ ಸದಸ್ಯರು “ಆಷಾಢ ಮಾಸದ ಒಂದು ದಿನ”ವನ್ನು ಜುಲೈ 8ರಂದು ಸಂಭ್ರಮದಿಂದ ಭಾಂಡುಪ್ ನ ಮಹಾರಾಷ್ಟ್ರ ನಗರದಲ್ಲಿರುವ ಸಭಾಗೃಹದಲ್ಲಿ ಆಚರಿಸಿದರು. ಕಾರ್ಯಕ್ರಮವನ್ನು ಆಸೋಸಿಯೇಷನ ಅಧ್ಯಕ್ಷ ಶ್ರೀ ರವೀಶ್ ಜಿ ಆಚಾರ್ಯ, ಪರಿಸರದ ಸಮಿತಿ ಸದಸ್ಯ ಶ್ರೀ ಜಯಚಂದ್ರ ಆಚಾರ್ಯ, ಯುವ ವಿಭಾಗದ ಕಾರ್ಯಾಧ್ಯಕ್ಷ ಶ್ರೀ ಸಂದೇಶ್ ಆಚಾರ್ಯ ಮತ್ತು ಹಿರಿಯರಾದ ಶ್ರೀ ಪುರುಷೋತ್ತಮ ಆಚಾರ್ಯ, ವಾಸುದೇವ ಆಚಾರ್ಯ ಹಾಗೂ ರವಿ ಆಚಾರ್ಯರು ಉಪಸ್ಥಿತರಿದ್ದು ದೀಪ ಪ್ರಜ್ವಲನೆಯೊಂದಿಗೆ ಉದ್ಘಾಟಿಸಿದರು.






ನಂತರ ಅಧ್ಯಕ್ಷ ರವೀಶ್ ಜಿ ಆಚಾರ್ಯರವರು ಮಾತನಾಡಿ ಆಟಿ ತಿಂಗಳ ವಿಶೇಷತೆ ಮತ್ತು ನಮ್ಮ ಹಿರಿಯರು ಆ ತಿಂಗಳಲ್ಲಿ ಎಷ್ಟು ಕಷ್ಟ ಪಡುತ್ತಿದ್ದರು, ಹಣದ ಸಮಸ್ಯೆಯಿಂದ ಮನೆಯಲ್ಲಿ ಶೇಖರಿಸಿಟ್ಟ ಧವಸ ಧಾನ್ಯಗಳಿಂದ ತಿಂಡಿ ತಿನಿಸುಗಳನ್ನು ತಯಾರಿಸಿ, ಬೆಳೆಸಿದ ಸೊಪ್ಪು ತರಕಾರಿಗಳನ್ನು ಸೇವಿಸಿ ಹೇಗೆ ಆರೋಗ್ಯವಂತರಾಗಿ ಬದುಕಿದ್ದರು ಎಂಬ ವಿಚಾರವಾಗಿ ತಿಳಿಸಿದರು. ಇಂದಿನ ಜನಾಂಗ ಆಧುನಿಕ ಆಹಾರ ಪದ್ಧತಿಗಳನ್ನು ಅನುಸರಿಸಿ ತಮ್ಮ ತಮ್ಮ ಆರೋಗ್ಯವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ. ಇಂದಿನ ಜನಾಂಗ ಇಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಯಾವ ರೀತಿ ಆಹಾರ ಪದ್ಧತಿಯಿಂದ ತಮ್ಮ ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ಎಂದು ತಿಳಿಯಬಹುದು ಎಂಬ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ಆಷಾಡ ಮಾಸ ಕೀಳಾದ ಮಾಸವಲ್ಲ. ಈ ತಿಂಗಳಲ್ಲಿ ಭಗವಂತನ ಪೂಜೆ ಪುರಸ್ಕಾರಗಳನ್ನು ಮಾಡಿದರೆ ಉತ್ತಮ ಫಲ ಸಿಗುತ್ತದೆ. ಪಂಡರಾಪುರದಲ್ಲಿ ಪಾಂಡುರಂಗನಿಗೆ ಆಷಾಡ ಮಾಸವೇ ವಿಶೇಷ. ನೀವು ಕಷ್ಟಪಟ್ಟು, ಆಸಕ್ತಿಯಿಂದ ಹಿಂದಿನ ಆಷಾಡ ಮಾಸದ ವಿಶೇಷ ಖಾದ್ಯಗಳನ್ನು ಮಾಡಿ ತಂದಿದ್ದೀರಿ. ನಿಮ್ಮ ಪರಿಶ್ರಮ ಮೆಚ್ಚುವಂಥದ್ದು ಮತ್ತು ನಿಮ್ಮ ಒಗ್ಗಟ್ಟು ಸ್ನೇಹ ಇದೇ ರೀತಿ ಮುಂದುವರೆಯಲಿ. ನಮ್ಮ ಸಮಾಜ ಸದೃಢವಾಗಲಿ ಎಂದು ಅಭಿನಂದಿಸಿದರು.




ಯುವ ವಿಭಾಗದ ಕಾರ್ಯಾಧ್ಯಕ್ಷ ಸಂದೇಶ ಜೆ ಆಚಾರ್ಯರು ಮಾತನಾಡಿ, ಇಂತಹ ಕಾರ್ಯಕ್ರಮಗಳಿಂದ ನಮ್ಮಂತಹ ಯುವ ಜನಾಂಗಕ್ಕೆ ನಮ್ಮ ಹಿರಿಯರು ಯಾವ ರೀತಿಯ ಕಷ್ಟವನ್ನು ಅನುಭವಿಸುತ್ತಿದ್ದರು, ಕೆಲಸವಿಲ್ಲದೆ ಮನೆಯಲ್ಲಿ ಸಂಗ್ರಹಿಸಿದ್ದ ಆಹಾರದಿಂದಲೇ ಜೀವನ ಸಾಗಿಸುತ್ತಿದ್ದರು. ಆಟಿ ಅಮಾವಾಸ್ಯೆಯಂದು ಹಾಳೆಯ ಕೆತ್ತೆಯ ಕಷಾಯವನ್ನು ಮಾಡಿ ಕುಡಿಯುತಿದ್ದರು. ಇದು ಆರೋಗ್ಯಕ್ಕೆ ಉತ್ತಮ. ಇಂದಿನ ಜನಾಂಗ ಇದನ್ನೆಲ್ಲ ತಿಳಿದುಕೊಳ್ಳಬೇಕು. ಇಂತಹ ಕಾರ್ಯಕ್ರಮವನ್ನು ಆಯೋಜಿಸಿದ ನಿಮಗೆಲ್ಲರಿಗೂ ಅಭಿನಂದನೆಗಳು ಎಂದು ನುಡಿದರು.
ಬಳಿಕ ಸದಸ್ಯರ ಮಕ್ಕಳಿಗೆ, ಮಹಿಳೆಯರಿಗೆ ಬಣ್ಣದ ಗೇಮ್ಸ್, ಮಕ್ಕಳಿಗೆ ಮಹಿಳೆಯರಿಗೆ ಹಾಗು ಗಂಡಸರಿಗೆ ಮ್ಯೂಸಿಕಲ್ ಚೇರ್ ಆಟೋಟ ಸ್ಪರ್ಧೆಗಳು ಮನೋರಂಜನಾ ಅಂಗವಾಗಿ ಜರುಗಿದವು. ಮಹಿಳಾ ಸದಸ್ಯೆಯರು ತಮ್ಮ ತಮ್ಮ ಮನೆಗಳಲ್ಲಿ ಸಂಪ್ರದಾಯಿಕ ರೀತಿಯಲ್ಲಿ ತಯಾರಿಸಿದ ವೈವಿಧ್ಯಮಯವಾದ ಆಟಿ ತಿಂಗಳ ವಿಶೇಷ ಖಾದ್ಯಗಳ ಪ್ರದರ್ಶನ ಹಾಗೂ ಸವಿಯವ ಕಾರ್ಯಕ್ರಮ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ವಂದನಾರ್ಪಣೆ ಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು. … ಕಾರ್ಯಕ್ರಮವನ್ನು ಶ್ರೀಮತಿ ಅರ್ಚನಾ ಸೂರಜ್ ಆಚಾರ್ಯರು ನಿರ್ವಹಿಸಿದರು. ಸಮಿತಿಯ ಸದಸ್ಯ ಶ್ರೀ ಜಯಚಂದ್ರ ಆಚಾರ್ಯರು ಕಾರ್ಯಕ್ರಮವನ್ನು ಆಯೋಜಿಸುವಲ್ಲಿ ಮುಖ್ಯ ಪಾತ್ರ ವಹಿಸಿದ್ದರು.




