May 27, 2026
Mumbai News Kannada
ಸುದ್ದಿ

ಜಾಗತಿಕ ಮತ್ತು ರಾಷ್ಟ್ರೀಯ ವಿದ್ಯಮಾನಗಳೊಂದಿಗೆ ಕರ್ನಾಟಕ ಹಾಗೂ ಮಹಾರಾಷ್ಟ್ರ, ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯ ಇಂದಿನ (27/05)ಪ್ರಮುಖ ಅಪ್‌ಡೇಟ್‌ಗಳು





ಅಂತರರಾಷ್ಟ್ರೀಯ ಮುಖ್ಯಾಂಶಗಳು :

ಜಾಗತಿಕ ಮಟ್ಟದಲ್ಲಿ ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಮುಂದುವರಿದಿದ್ದು, ಅಮೆರಿಕ ಮತ್ತು ಇಸ್ರೇಲ್ ವೈಮಾನಿಕ ದಾಳಿಗಳ ಬಳಿಕ ಇರಾನ್‌ನಲ್ಲಿ ಹೇರಲಾಗಿದ್ದ ಇಂಟರ್ನೆಟ್ ನಿಷೇಧವನ್ನು ತಿಂಗಳುಗಳ ನಂತರ ಭಾಗಶಃ ಹಿಂಪಡೆಯಲಾಗಿದೆ. ಇತ್ತ ಯುರೋಪ್‌ನಲ್ಲಿ ಅವಧಿಗೂ ಮುನ್ನವೇ ಭಾರಿ ತಾಪಮಾನದ ಅಲೆ (Heatwave) ಕಾಣಿಸಿಕೊಂಡಿದ್ದು, ಬ್ರಿಟನ್ ಮತ್ತು ಫ್ರಾನ್ಸ್‌ನಲ್ಲಿ ತಾಪಮಾನ ದಾಖಲೆ ಮಟ್ಟಕ್ಕೆ ಏರಿಕೆಯಾಗಿದೆ. ಮತ್ತೊಂದೆಡೆ ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋದಲ್ಲಿ (DRC) ಎಬೋಲಾ ವೈರಸ್ ಸೋಂಕು ತೀವ್ರವಾಗಿ ಹರಡುತ್ತಿರುವುದು ಜಾಗತಿಕ ಆರೋಗ್ಯ ಸಂಸ್ಥೆಗಳಲ್ಲಿ ಕಳವಳ ಮೂಡಿಸಿದೆ. ಇನ್ನು ಬೆಲ್ಜಿಯಂನಲ್ಲಿ ಶಾಲಾ ಬಸ್‌ಗೆ ರೈಲು ಡಿಕ್ಕಿಯಾದ ಭೀಕರ ಅಪಘಾತದಲ್ಲಿ ಇಬ್ಬರು ವಿದ್ಯಾರ್ಥಿಗಳು ಸೇರಿದಂತೆ ನಾಲ್ವರು ಸಾವನ್ನಪ್ಪಿದ್ದಾರೆ.

ಭಾರತದ ಪ್ರಮುಖ ಸುದ್ದಿಗಳು :

ರಾಷ್ಟ್ರ ಮಟ್ಟದಲ್ಲಿ ಇಂದು ನವದೆಹಲಿಯಲ್ಲಿ ಜವಾಹರಲಾಲ್ ನೆಹರು ಅವರ ಪುಣ್ಯತಿಥಿಯ ಅಂಗವಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಶಾಂತಿವನಕ್ಕೆ ಭೇಟಿ ನೀಡಿ ಪುಷ್ಪ ನಮನ ಸಲ್ಲಿಸಿದ್ದಾರೆ. ಮತ್ತೊಂದೆಡೆ ಸುಪ್ರೀಂ ಕೋರ್ಟ್ ಇಂದು ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆಯನ್ನು (SIR) ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿಗಳ ಮೇಲಿನ ಪ್ರಮುಖ ತೀರ್ಪನ್ನು ಪ್ರಕಟಿಸಲಿದೆ. ಗಡಿ ಭಾಗದಲ್ಲಿ ಮುಂದಿನ ಆರು ತಿಂಗಳೊಳಗೆ ಡ್ರೋನ್ ನಿರೋಧಕ ವ್ಯವಸ್ಥೆಗಳನ್ನು ಅಳವಡಿಸಲಾಗುವುದು ಎಂದು ಗೃಹ ಸಚಿವ ಅಮಿತ್ ಶಾ ಅವರು ತಿಳಿಸಿದ್ದಾರೆ. ದೆಹಲಿಯಲ್ಲಿ ವಾಯು ಮಾಲಿನ್ಯ ನಿಯಂತ್ರಣಕ್ಕಾಗಿ ರಸ್ತೆಗಳಲ್ಲಿ ಧೂಳು ನಿಯಂತ್ರಣ ಯಂತ್ರಗಳ ಬಳಕೆಯನ್ನು ಹೆಚ್ಚಿಸಲು ಅಲ್ಲಿನ ಸರ್ಕಾರ ಮುಂದಾಗಿದೆ.
ಕರ್ನಾಟಕದ ಮುಖ್ಯಾಂಶಗಳು :

ಕರ್ನಾಟಕದಲ್ಲಿ ರಾಜಕೀಯ ಚಟುವಟಿಕೆಗಳು ತೀವ್ರಗೊಂಡಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ರಾಜ್ಯಸಭೆಗೆ ಕಳುಹಿಸುವ ಬಗ್ಗೆ ಕಾಂಗ್ರೆಸ್ ಹೈಕಮಾಂಡ್ ಮಟ್ಟದಲ್ಲಿ ಚರ್ಚೆಗಳು ನಡೆಯುತ್ತಿವೆ ಎಂಬ ವದಂತಿಗಳ ಬೆನ್ನಲ್ಲೇ, ನಾಳೆ ಮುಖ್ಯಮಂತ್ರಿಗಳು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರೊಂದಿಗೆ ಬೆಂಗಳೂರಿನ ಕಾವೇರಿ ನಿವಾಸದಲ್ಲಿ ಪ್ರಮುಖ ಉಪಾಹಾರ ಸಭೆ ನಡೆಸಲಿದ್ದಾರೆ. ಇದರ ನಡುವೆ, ಬೀದರ್‌ನಲ್ಲಿ ಭಾರಿ ಬಿರುಗಾಳಿ ಸಹಿತ ಆಲಿಕಲ್ಲು ಮಳೆಗೆ ಮನೆಯ ಮೇಲ್ಛಾವಣಿಯ ಕಲ್ಲು ಬಿದ್ದು 6 ವರ್ಷದ ಬಾಲಕಿ ಮೃತಪಟ್ಟಿರುವ ದುರಂತ ಸಂಭವಿಸಿದೆ. ಇನ್ನು ಕರಾವಳಿ ಭಾಗದಲ್ಲಿ ಮುಂಗಾರು ಮಳೆ ಪ್ರವೇಶ ಕೊಂಚ ವಿಳಂಬವಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಮಹಾರಾಷ್ಟ್ರದ ವಿದ್ಯಮಾನಗಳು :

ಮಹಾರಾಷ್ಟ್ರದಲ್ಲಿ ಇಂಧನ ದರ ಏರಿಕೆಯ ಬೆನ್ನಲ್ಲೇ ಕೃಷಿ ಚಟುವಟಿಕೆಗಳಿಗಾಗಿ ಡೀಸೆಲ್ ಪಡೆಯಲು ಗ್ರಾಹಕರು ಮುಗಿಬಿದ್ದಿರುವುದರಿಂದ ತೀವ್ರ ಪೆಟ್ರೋಲ್ ಮತ್ತು ಡೀಸೆಲ್ ಕೊರತೆ ಎದುರಾಗಿದ್ದು, ಕೆಲವು ಜಿಲ್ಲೆಗಳಲ್ಲಿ ಇಂಧನ ಮಾರಾಟಕ್ಕೆ ಮಿತಿ ಹೇರಲಾಗಿದೆ. ಆದಾಗ್ಯೂ ಯಾವುದೇ ಕೊರತೆಯಿಲ್ಲ, ಆತಂಕ ಪಡುವ ಅಗತ್ಯವಿಲ್ಲ ಎಂದು ತೈಲ ಕಂಪನಿಗಳು ಸ್ಪಷ್ಟಪಡಿಸವೆ. ಇದೇ ವೇಳೆ ಮಹಾರಾಷ್ಟ್ರ ಸರ್ಕಾರವು ಜಮೀನಿನ 7/12 ದಾಖಲೆಯ ಮಾದರಿಯಲ್ಲೇ ನೀರಿನ ಬಳಕೆಯನ್ನು ವೈಜ್ಞಾನಿಕವಾಗಿ ದಾಖಲಿಸಲು ದೇಶದಲ್ಲೇ ಮೊದಲ ಬಾರಿಗೆ ‘ವಾಟರ್ 7/12’ ವ್ಯವಸ್ಥೆಯನ್ನು ಪ್ರಾಯೋಗಿಕವಾಗಿ ಜಾರಿಗೆ ತರಲು ಸಜ್ಜಾಗಿದೆ.
ಉಡುಪಿ ಜಿಲ್ಲೆಯ ವಿಶೇಷ ಸುದ್ದಿಗಳು :

ಉಡುಪಿ ಜಿಲ್ಲೆಯ ಪ್ರಸಿದ್ಧ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ಮೇ ತಿಂಗಳ ಹುಂಡಿ ಎಣಿಕೆಯಲ್ಲಿ ಭಾರಿ ಪ್ರಮಾಣದ ನಗದು, ಚಿನ್ನ ಮತ್ತು ಬೆಳ್ಳಿ ಸಂಗ್ರಹವಾಗುವ ಮೂಲಕ ಸರ್ವಕಾಲಿಕ ದಾಖಲೆಯ ಕಾಣಿಕೆ ಸಂಗ್ರಹವಾಗಿದೆ. ಮತ್ತೊಂದು ಘಟನೆಯಲ್ಲಿ ಉಡುಪಿಯಲ್ಲಿ ಸರ್ಕಾರಿ ಬಸ್ಸೊಂದರ ಚಲಿಸುತ್ತಿದ್ದಾಗಲೇ ಚಕ್ರದ ಆಕ್ಸಲ್ ತುಂಡಾಗಿ ಟಯರ್ ಕಿತ್ತು ಬಂದಿದ್ದು, ಚಾಲಕನ ಸಮಯಪ್ರಜ್ಞೆಯಿಂದ ಭಾರಿ ಅನಾಹುತ ತಪ್ಪಿದೆ.

ದಕ್ಷಿಣ ಕನ್ನಡ ಜಿಲ್ಲೆಯ ತಾಜಾ ಸುದ್ದಿಗಳು :

ದಕ್ಷಿಣ ಕನ್ನಡ ಜಿಲ್ಲೆಯ ಜೋಕಟ್ಟೆ, ಕಲಾವಾರು ಮತ್ತು ಕೆಂಜಾರು ಗ್ರಾಮಸ್ಥರು ಎಂಆರ್‌ಪಿಎಲ್ ಕೋಕ್ ಸಲ್ಫರ್ ಘಟಕದ ಮಾಲಿನ್ಯದ ವಿರುದ್ಧ ನಡೆಸುತ್ತಿದ್ದ ಎಂಟು ದಿನಗಳ ಸುದೀರ್ಘ ಅಹೋರಾತ್ರಿ ಧರಣಿಯನ್ನು ಹಿಂಪಡೆದಿದ್ದಾರೆ. ಜಿಲ್ಲಾಧಿಕಾರಿ ದರ್ಶನ್ ಹೆಚ್.ವಿ. ಅವರು ಮುಂದಿನ ಆರು ತಿಂಗಳೊಳಗೆ ಕಾನೂನುಬದ್ಧವಾಗಿ ಭೂಸ್ವಾಧೀನ ಪ್ರಕ್ರಿಯೆಗಳನ್ನು ಪೂರ್ಣಗೊಳಿಸುವ ಭರವಸೆ ನೀಡಿದ ಹಿನ್ನೆಲೆಯಲ್ಲಿ ಈ ಪ್ರತಿಭಟನೆಯನ್ನು ಕೈಬಿಡಲಾಗಿದೆ. ಅಲ್ಲದೆ ಇತ್ತೀಚೆಗೆ ದಕ್ಷಿಣ ಕನ್ನಡ ಜಿಲ್ಲೆಯ ವಾರ್ಷಿಕ ಅಭಿವೃದ್ಧಿ ಯೋಜನೆಗಾಗಿ ಒಟ್ಟು 2,561.2 ಕೋಟಿ ರೂಪಾಯಿಗಳ ಅನುದಾನದ ಕರಡು ಪ್ರತಿಗೂ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ನೇತೃತ್ವದಲ್ಲಿ ಅನುಮೋದನೆ ದೊರೆತಿದೆ.



Related posts

ಧರ್ಮಪಾಲ್ ದೇವಾಡಿಗ ಮತ್ತು ಚಂದ್ರಶೇಖರ್ ಬೆಳ್ಚಡ ಇವರಿಂದ ಡಾ. ವೀರೇಂದ್ರ ಹೆಗ್ಗಡೆ ಭೇಟಿ: ಸಸಿಹಿತ್ಲು ಶ್ರೀ ಭಗವತಿ ದೇವಸ್ಥಾನದ ಬ್ರಹ್ಮಕಲಶೋತ್ಸವದ ಬಗ್ಗೆ ಸಮಾಲೋಚನೆ

Mumbai News Desk

ಭಾರತ್ ಬ್ಯಾಂಕ್‌ಗೆ NAFCUB ಮತ್ತು ಬ್ಯಾಂಕಿಂಗ್ ಫ್ರಾಂಟಿಯರ್ಸ್ ವತಿಯಿಂದ ಶ್ರೇಷ್ಠ ಸೈಬರ್‌ ಸೆಕ್ಯೂರಿಟಿ ಪ್ರಶಸ್ತಿ ಹಾಗೂ ಶ್ರೇಷ್ಠ ಅಪಾಯ ನಿರ್ವಹಣಾ ಪ್ರಶಸ್ತಿ

Mumbai News Desk

“ಆನಂದವನ್ನು ನಮ್ಮೊಳಗೆ ಹುಡುಕಬೇಕು” : ಪೂಜ್ಯ ಒಡಿಯೂರು ಶ್ರೀಗಳವರಿಂದ ಸಂದೇಶ

Mumbai News Desk

ಹಿರಿಯ ಸಾಹಿತಿ ಎಸ್.ಎಲ್.ಭೈರಪ್ಪ ನಿಧನ

Mumbai News Desk

ಮಹಾರಾಷ್ಟ್ರ ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಬಿರುಗಾಳಿಗೆ ಸಿಲುಕಿ ಭೀಕರ ಅಪಘಾತದಿಂದ ಪಾರು: ಜುಹು ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ

Mumbai News Desk

ಹೆಜಮಾಡಿ ಗ್ರಾಮೀಣ ಕಾಂಗ್ರೆಸ್ ಸಮಿತಿಯ ಪದಪ್ರದಾನ

Mumbai News Desk