31.5 C
Mumbai
June 16, 2026
Mumbai News Kannada
ಸುದ್ದಿ

ಜಾಗತಿಕ, ರಾಷ್ಟ್ರೀಯ, ರಾಜ್ಯ ಮತ್ತು ಮುಂಬೈ, ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯ ಇಂದಿನ (16/06/26)ಪ್ರಮುಖ ವಿದ್ಯಮಾನಗಳ ಸಂಕ್ಷಿಪ್ತ ಸುದ್ದಿ ಸಂಕಲನ





ವಿಶ್ವ ಸುದ್ದಿ :

ಅಮೆರಿಕ ಮತ್ತು ಇರಾನ್ ನಡುವಿನ ಸುದೀರ್ಘ 107 ದಿನಗಳ ಸಂಘರ್ಷಕ್ಕೆ ಕೊನೆಗೂ ತೆರೆಬೀಳುವ ಲಕ್ಷಣಗಳು ಕಾಣುತ್ತಿದ್ದು, ಉಭಯ ದೇಶಗಳ ನಡುವೆ 14 ಅಂಶಗಳ ಐತಿಹಾಸಿಕ ಶಾಂತಿ ಒಪ್ಪಂದದ ಪ್ರಕ್ರಿಯೆಗಳು ಅಂತಿಮ ಹಂತಕ್ಕೆ ತಲುಪಿವೆ. ಈ ಪ್ರಮುಖ ಒಪ್ಪಂದದ ಡಿಜಿಟಲ್ ಸಹಿ ಪ್ರಕ್ರಿಯೆ ಮುಗಿದಿದ್ದು, ಜೂನ್ 19ರಂದು ಅಧಿಕೃತವಾಗಿ ಜಾರಿಗೆ ಬರಲಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜಿ7 ಶೃಂಗಸಭೆಗಾಗಿ ಫ್ರಾನ್ಸ್‌ಗೆ ಬಂದಿಳಿದ ನಂತರ ಜಾಗತಿಕ ವೇದಿಕೆಯಲ್ಲಿ ಘೋಷಿಸಿದ್ದಾರೆ. ಈ ಒಪ್ಪಂದದ ಅನ್ವಯ ಅಂತರರಾಷ್ಟ್ರೀಯ ವ್ಯಾಪಾರದ ಪ್ರಮುಖ ಮಾರ್ಗವಾದ ಹೊರ್ಮುಜ್ ಜಲಸಂಧಿಯಲ್ಲಿ ಅಮೆರಿಕ ಹೇರಿದ್ದ ದಿಗ್ಬಂಧನಗಳು ತೆರವಾಗಲಿದ್ದು, ಹಡಗುಗಳ ಮುಕ್ತ ಹಾಗೂ ಟೋಲ್ ಮುಕ್ತ ಸಂಚಾರಕ್ಕೆ ಹಾದಿ ಸುಗಮವಾಗಲಿದೆ. ಆದರೆ, ಈ ಒಪ್ಪಂದದ ನಡುವೆಯೂ ಅಮೆರಿಕವನ್ನು ಸಂಪೂರ್ಣವಾಗಿ ನಂಬಲು ಸಾಧ್ಯವಿಲ್ಲ ಎಂದು ಇರಾನ್ ಹೇಳಿರುವುದು ಮತ್ತು ಲೆಬನಾನ್, ಸಿರಿಯಾ ಹಾಗೂ ಗಾಜಾದಲ್ಲಿನ ತನ್ನ ಮಿಲಿಟರಿ ಕಾರ್ಯಾಚರಣೆಗಳಿಗೆ ಈ ಒಪ್ಪಂದ ಅನ್ವಯಿಸುವುದಿಲ್ಲ ಎಂದು ಇಸ್ರೇಲ್ ಎಚ್ಚರಿಕೆ ನೀಡಿರುವುದು ಮಧ್ಯಪ್ರಾಚ್ಯದಲ್ಲಿ ಇನ್ನು ಯಕ್ಷಪ್ರಶ್ನೆಯಾಗಿಯೇ ಉಳಿದಿದೆ.
ಇನ್ನೊಂದೆಡೆ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಐದು ದಿನಗಳ ಯೂರೋಪ್ ಪ್ರವಾಸದ ಭಾಗವಾಗಿ ಸ್ಲೊವಾಕಿಯಾ ದೇಶಕ್ಕೆ ಭೇಟಿ ನೀಡಿದ್ದು, ಅಲ್ಲಿನ ಪ್ರಧಾನಿ ರಾಬರ್ಟ್ ಫಿಕೊ ಅವರೊಂದಿಗೆ ಮಹತ್ವದ ದ್ವಿಪಕ್ಷೀಯ ಮಾತುಕತೆ ನಡೆಸಿದ್ದಾರೆ. ಭಾರತ ಮತ್ತು ಸ್ಲೊವಾಕಿಯಾ ನಡುವೆ ರಕ್ಷಣೆ, ಡಿಜಿಟಲ್ ತಂತ್ರಜ್ಞಾನ ಹಾಗೂ ವಲಸೆ ಸೇರಿದಂತೆ ಒಟ್ಟು 11 ಪ್ರಮುಖ ಕ್ಷೇತ್ರಗಳ ಒಪ್ಪಂದಗಳಿಗೆ ಉಭಯ ನಾಯಕರು ಸಹಿ ಹಾಕಿದ್ದಾರೆ. ಇದರ ಬೆನ್ನಲ್ಲೇ ಪ್ರಧಾನಿ ಮೋದಿ ಅವರು ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರನ್ನು ಭೇಟಿಯಾಗಲಿದ್ದು, ಜಾಗತಿಕ ರಕ್ಷಣಾ ಪಾಲುದಾರಿಕೆ ಕುರಿತು ಮತ್ತಷ್ಟು ಚರ್ಚೆಗಳು ನಡೆಯಲಿವೆ.
ಅಮೆರಿಕದ ಪ್ರತಿಷ್ಠಿತ ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯದ ಘಟಿಕೋತ್ಸವ ಸಮಾರಂಭದಲ್ಲಿ ಅನಿರೀಕ್ಷಿತ ಹಂಗಾಮೆ ಸೃಷ್ಟಿಯಾಗಿದೆ. ಗೂಗಲ್ ಸಿಇಒ ಸುಂದರ್ ಪಿಚೈ ಅವರು ಮುಖ್ಯ ಅತಿಥಿಯಾಗಿ ವೇದಿಕೆ ಏರಿ ಭಾಷಣ ಆರಂಭಿಸುತ್ತಿದ್ದಂತೆಯೇ, ಇಸ್ರೇಲ್‌ನೊಂದಿಗಿನ ಗೂಗಲ್‌ನ ‘ಪ್ರಾಜೆಕ್ಟ್ ನಿಂಬಸ್’ ತಂತ್ರಜ್ಞಾನ ಒಪ್ಪಂದವನ್ನು ವಿರೋಧಿಸಿ ಹಾಗೂ ಪ್ಯಾಲೆಸ್ಟೀನ್‌ಗೆ ಬೆಂಬಲ ವ್ಯಕ್ತಪಡಿಸಿ ನೂರಾರು ವಿದ್ಯಾರ್ಥಿಗಳು ಸಭಾಂಗಣದಿಂದ ಹೊರನಡೆಯುವ ಮೂಲಕ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಂತ್ರಜ್ಞಾನ ವಲಯದಲ್ಲಿ ಅಮೆರಿಕದ ಮತ್ತೊಂದು ಬಿಗ್ ಬ್ಯಾನ್ ಜಾರಿಯಾಗಿದ್ದು, ವಿದೇಶಿ ಬಳಕೆದಾರರಿಗೆ ಆಂಥ್ರೋಪಿಕ್ ಫೇಬಲ್ 5 ಮತ್ತು ಮಿಥೋಸ್ 5 ಎಐ ಮಾಡೆಲ್‌ಗಳನ್ನು ಬಳಸದಂತೆ ನಿರ್ಬಂಧ ವಿಧಿಸಲಾಗಿದೆ.
ಕ್ರೀಡಾ ಜಗತ್ತಿನಲ್ಲಿ, ಡಂಬುಲಾದಲ್ಲಿ ನಡೆದ ಭಾರತ ಎ ಮತ್ತು ಶ್ರೀಲಂಕಾ ಎ ತಂಡಗಳ ನಡುವಿನ ತೀವ್ರ ಪೈಪೋಟಿಯ ತ್ರಿಕೋನ ಸರಣಿಯ ಪಂದ್ಯವು ರೋಚಕ ಟೈನಲ್ಲಿ ಅಂತ್ಯಗೊಂಡಿದೆ. ಆ ಬಳಿಕ ನಡೆದ ಸೂಪರ್ ಓವರ್‌ನಲ್ಲಿ ಭಾರತ ತಂಡವು ಲಂಕಾ ವಿರುದ್ಧ ಸೋಲೊಪ್ಪಿಕೊಂಡಿತು. ಪಂದ್ಯ ಮುಗಿದ ನಂತರ ಭಾರತದ ಯುವ ಬ್ಯಾಟರ್ ವೈಭವ್ ಸೂರ್ಯವಂಶಿ ಮತ್ತು ಶ್ರೀಲಂಕಾ ಆಟಗಾರರ ನಡುವೆ ಮೈದಾನದಲ್ಲೇ ತೀವ್ರ ವಾಗ್ವಾದ ನಡೆದಿದ್ದು, ಕ್ರೀಡಾಸ್ಫೂರ್ತಿಗೆ ಧಕ್ಕೆ ತಂದ ಈ ಘಟನೆಯ ವಿಡಿಯೋ ಜಾಗತಿಕವಾಗಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಬ್ರೆಜಿಲ್‌ನಲ್ಲಿ ಬಂಗಿ ಜಂಪ್ ಮಾಡುವ ವೇಳೆ ಸಿಬ್ಬಂದಿಯ ನಿರ್ಲಕ್ಷ್ಯದಿಂದ ಸುರಕ್ಷತಾ ಹಗ್ಗವನ್ನು ಕಟ್ಟದೆಯೇ 40 ಮೀಟರ್ ಎತ್ತರದಿಂದ ಯುವತಿಯೊಬ್ಬಳನ್ನು ಕೆಳಗೆ ನೂಕಿದ ಪರಿಣಾಮ ಆಕೆ ದಾರುಣವಾಗಿ ಸಾವನ್ನಪ್ಪಿದ ಭೀಕರ ವಿಡಿಯೋ ಜಾಗತಿಕವಾಗಿ ತಲ್ಲಣ ಸೃಷ್ಟಿಸಿದೆ.

ದೇಶ :

ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್ (TMC) ಪಕ್ಷದಲ್ಲಿ ಭಾರಿ ಬಂಡಾಯ ಎದ್ದಿದ್ದು, ಸಂಸದೆ ಕಾಕೋಲಿ ಘೋಷ್ ದಸ್ತಿದಾರ್ ನೇತೃತ್ವದ ಸುಮಾರು 20 ರಿಂದ 22 ಸಂಸದರ ಬಣವು ಶರದ್ ಪವಾರ್ ನೇತೃತ್ವದ ಎನ್‌ಸಿಪಿ (NCPI) ಪಕ್ಷದೊಂದಿಗೆ ವಿಲೀನಗೊಳ್ಳಲು ನಿರ್ಧರಿಸಿದೆ. ಈ ಬಂಡಾಯ ಗುಂಪಿನಲ್ಲಿ ಮಾಜಿ ಕ್ರಿಕೆಟಿಗ ಹಾಗೂ ಸಂಸದ ಯೂಸುಫ್ ಪಠಾಣ್ ಕೂಡ ಸೇರಿದ್ದಾರೆ ಎನ್ನಲಾಗಿದ್ದು, ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರನ್ನು ಭೇಟಿಯಾಗಲು ಸಂಸದರು ಸಜ್ಜಾಗಿದ್ದಾರೆ. ಈ ರಾಜಕೀಯ ಬೆಳವಣಿಗೆಯು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ಭಾರಿ ಆಘಾತ ನೀಡಿದೆ.
ದೇಶದ ಇಂಧನ ವಲಯದಲ್ಲಿ ಮಹತ್ವದ ಮೈಲಿಗಲ್ಲಾಗಬಲ್ಲ ಎಥೆನಾಲ್ ಕ್ರಾಂತಿಗೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಹಸಿರು ನಿಶಾನೆ ತೋರಿದ್ದಾರೆ. ವಾಹನಗಳಲ್ಲಿ ಶೇ. 100 ರಷ್ಟು ಎಥೆನಾಲ್ ಇಂಧನ ಬಳಸಲು ಅನುಮತಿ ನೀಡಲಾಗಿದ್ದು, ದೇಶದ ಮೊದಲ ಫ್ಲೆಕ್ಸ್-ಫ್ಯೂಯಲ್ ಪ್ಯಾಸೆಂಜರ್ ಕಾರು (ಮಾರುತಿ ವ್ಯಾಗನ್ಆರ್) ಬಿಡುಗಡೆಗೆ ಸಿದ್ಧವಾಗಿದೆ. ಇದರಿಂದಾಗಿ ಇಂಧನ ದರ ಮತ್ತು ಮಾಲಿನ್ಯ ನಿಯಂತ್ರಣಕ್ಕೆ ದೊಡ್ಡ ಮಟ್ಟದ ನೆರವಾಗಲಿದೆ ಎಂದು ನಿರೀಕ್ಷಿಸಲಾಗಿದೆ.
ಬೆಂಗಳೂರು ಪೊಲೀಸರು ಜೈಪುರದಲ್ಲಿ ಲಂಚ ಪಡೆಯುತ್ತಿದ್ದಾಗ ರಾಜಸ್ಥಾನದ ಭ್ರಷ್ಟಾಚಾರ ನಿಗ್ರಹ ದಳದ (ACB) ಬಲೆಗೆ ಬಿದ್ದಿರುವ ನಾಚಿಕೆಗೇಡಿನ ಘಟನೆ ವರದಿಯಾಗಿದೆ. ಸೈಬರ್ ಕ್ರೈಮ್ ಪ್ರಕರಣವೊಂದರ ತನಿಖೆಗಾಗಿ ಜೈಪುರಕ್ಕೆ ಹೋಗಿದ್ದ ಬೆಂಗಳೂರಿನ ಪೊಲೀಸ್ ಸಿಬ್ಬಂದಿ, ಅಲ್ಲಿನ ಸ್ಥಳೀಯ ಉದ್ಯಮಿಯೊಬ್ಬರಿಂದ ಪ್ರಕರಣ ಇತ್ಯರ್ಥಪಡಿಸಲು ಭಾರಿ ಮೊತ್ತದ ಲಂಚಕ್ಕೆ ಬೇಡಿಕೆಯಿಟ್ಟು ಸಿಕ್ಕಿಬಿದ್ದಿದ್ದಾರೆ.
ನೀಟ್ (NEET UG 2026) ಪರೀಕ್ಷೆಯಲ್ಲಿ ನಡೆಯುತ್ತಿರುವ ಅಕ್ರಮಗಳು ಮತ್ತು ಪ್ರಶ್ನೆ ಪತ್ರಿಕೆ ಸೋರಿಕೆ ದಂಧೆಯನ್ನು ತಡೆಗಟ್ಟಲು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಹೊಸ ತಂತ್ರಜ್ಞಾನ ಆಧಾರಿತ ವ್ಯವಸ್ಥೆಯನ್ನು ಜಾರಿಗೆ ತರುತ್ತಿದೆ. ಪರೀಕ್ಷಾ ಅಕ್ರಮಗಳ ಕುರಿತು ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ನೇರವಾಗಿ ದೂರು ಸಲ್ಲಿಸಲು ಎನ್‌ಟಿಎ ಪ್ರತ್ಯೇಕ ಸುರಕ್ಷಿತ ಪೋರ್ಟಲ್ ಒಂದನ್ನು ಆರಂಭಿಸಿದೆ. ಮತ್ತೊಂದೆಡೆ, ಟೆಲಿಗ್ರಾಂ ಆ್ಯಪ್ ಮೂಲಕ ನಕಲಿ ಪ್ರಶ್ನೆ ಪತ್ರಿಕೆಗಳನ್ನು ಮಾರಾಟ ಮಾಡಿ ಕೋಟ್ಯಂತರ ರೂಪಾಯಿ ವಂಚಿಸುತ್ತಿದ್ದ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಆರ್‌ಟಿಐ (ಮಾಹಿತಿ ಹಕ್ಕು ಕಾಯ್ದೆ) ಚಳವಳಿ ಮತ್ತು ಅರ್ಜಿ ಸಲ್ಲಿಕೆಗಳು ಇತ್ತೀಚಿನ ದಿನಗಳಲ್ಲಿ ಕೆಲವರಿಗೆ ಬ್ಲ್ಯಾಕ್‌ಮೇಲ್ ಮಾಡುವ ಹೊಸ ವ್ಯವಹಾರವಾಗಿ ಮಾರ್ಪಡುತ್ತಿವೆ ಎಂದು ಸುಪ್ರೀಂ ಕೋರ್ಟ್ ಕಳವಳ ವ್ಯಕ್ತಪಡಿಸಿದೆ. ಸರ್ಕಾರಿ ಅಧಿಕಾರಿಗಳನ್ನು ಮತ್ತು ಸಂಸ್ಥೆಗಳನ್ನು ಗುರಿಯಾಗಿಸಿಕೊಂಡು ಹಣ ವಸೂಲಿ ಮಾಡಲು ಆರ್‌ಟಿಐ ಬಳಸಿಕೊಳ್ಳುತ್ತಿದ್ದ ಮಾಹಿತಿ ಹಕ್ಕು ಕಾರ್ಯಕರ್ತನೊಬ್ಬನ ನಿರೀಕ್ಷಣಾ ಜಾಮೀನು ಅರ್ಜಿಯನ್ನು ವಜಾಗೊಳಿಸುವ ಸಂದರ್ಭದಲ್ಲಿ ನ್ಯಾಯಾಲಯ ಈ ಗಂಭೀರ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ.

ಕರ್ನಾಟಕ :

ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಅವರು ಕರ್ನಾಟಕದ ಗ್ಯಾರಂಟಿ ಯೋಜನೆಗಳಾದ ಗೃಹ ಲಕ್ಷ್ಮಿ ಮತ್ತು ಗೃಹ ಜ್ಯೋತಿ ಯೋಜನೆಗಳು ರಾಜ್ಯದ ಅರ್ಹ ಫಲಾನುಭವಿಗಳಿಗೆ ಮಾತ್ರ ತಲುಪಬೇಕು ಎಂಬುದು ಸರ್ಕಾರದ ಪ್ರಮುಖ ಉದ್ದೇಶವಾಗಿದ್ದು, ಯಾವುದೇ ಕಾರಣಕ್ಕೂ ಈ ಪಂಚ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಅಲ್ಲದೆ, ಮುಂಗಾರು ಹಂಗಾಮಿನ ಹಿನ್ನೆಲೆಯಲ್ಲಿ ರಾಜ್ಯದ ರೈತರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಬಿತ್ತನೆ ಬೀಜ ಹಾಗೂ ರಸಗೊಬ್ಬರಗಳನ್ನು ಸಮರ್ಪಕವಾಗಿ ಪೂರೈಸಲು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ರಾಜ್ಯ ಸಾರಿಗೆ ಇಲಾಖೆಯು ಶಕ್ತಿ ಯೋಜನೆಯಡಿ ಮಹಿಳೆಯರಿಗೆ ಶೀಘ್ರದಲ್ಲೇ ‘ಸ್ಮಾರ್ಟ್ ಕಾರ್ಡ್’ ವಿತರಿಸಲು ಅಂತಿಮ ಹಂತದ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿರುವುದಾಗಿ ಸಚಿವ ಬೈರತಿ ಸುರೇಶ್ ತಿಳಿಸಿದ್ದಾರೆ. ಮತ್ತೊಂದೆಡೆ, ಆರ್‌ಎಸ್‌ಎಸ್ ಸಂಘಟನೆಯ ನೋಂದಣಿ ಹಾಗೂ ಅದರ ಕಾರ್ಯವೈಖರಿಗೆ ಸಂಬಂಧಿಸಿದಂತೆ ರಾಜ್ಯ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರಿಗೆ ಪತ್ರ ಬರೆದು ಹಲವು ಪ್ರಮುಖ ಪ್ರಶ್ನೆಗಳನ್ನು ಕೇಳಿರುವುದು ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಇದಕ್ಕೆ ಪ್ರತಿಕ್ರಿಯಿಸಿರುವ ಮೋಹನ್ ಭಾಗವತ್, ಸಂಘವು ಯಾವುದೇ ರಹಸ್ಯವಾಗಿ ಕಾರ್ಯನಿರ್ವಹಿಸುತ್ತಿಲ್ಲ ಮತ್ತು ನೋಂದಣಿ ವಿಷಯ ಕೇವಲ ರಾಜಕೀಯ ಎಂದು ತಿರುಗೇಟು ನೀಡಿದ್ದಾರೆ.
ಮೈಸೂರಿನ ಪ್ರಸಿದ್ಧ ಬಾರ್ ಅಂಡ್ ರೆಸ್ಟೋರೆಂಟ್ ಒಂದರಲ್ಲಿ ಭೀಕರ ಅಗ್ನಿ ದುರಂತ ಸಂಭವಿಸಿದ್ದು, ಘಟನೆಯಲ್ಲಿ ಇಬ್ಬರು ಸಜೀವ ದಹನವಾಗಿದ್ದಾರೆ ಹಾಗೂ ಆರು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಇನ್ನು ಮನರಂಜನಾ ವಲಯದಿಂದ ಆಘಾತಕಾರಿ ಸುದ್ದಿಯೊಂದು ಬಂದಿದ್ದು, ‘ಮಜಾ ಭಾರತ’ ಮತ್ತು ‘ಕಾಮಿಡಿ ಕಿಲಾಡಿಗಳು’ ಖ್ಯಾತಿಯ ಹಾಸ್ಯ ಕಲಾವಿದ ನಟ ಸಿದ್ದಾರ್ಥ ಪರಸನೂರು ಅವರು ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾರೆ.
ಬೆಂಗಳೂರು ಕೆಎಸ್‌ಆರ್ (ಮೆಜೆಸ್ಟಿಕ್) ರೈಲು ನಿಲ್ದಾಣದಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ಮೂಲಸೌಕರ್ಯ ಹಾಗೂ ತಾಂತ್ರಿಕ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದ್ದು, ಇನ್ಮುಂದೆ ರೈಲುಗಳ ಸಂಚಾರ ಸರಾಗವಾಗಿ ನಡೆಯಲಿದ್ದು ಪ್ರಯಾಣಿಕರು ಗಂಟೆಗಟ್ಟಲೆ ಕಾಯುವ ಸಮಸ್ಯೆ ತಪ್ಪಲಿದೆ. ಇತ್ತೀಚೆಗೆ ನಡೆದ ಕರ್ನಾಟಕ ರೈಲ್ವೆ ಪರೀಕ್ಷೆಗಳಲ್ಲಿ ಕನ್ನಡ ಭಾಷೆಗೆ ಮತ್ತೆ ಅನ್ಯಾಯವಾಗಿದ್ದು, ತಪ್ಪು ತಿದ್ದಿಕೊಳ್ಳದಿದ್ದರೆ ತೀವ್ರ ಹೋರಾಟ ಮಾಡುವುದಾಗಿ ಕರ್ನಾಟಕ ರಕ್ಷಣಾ ವೇದಿಕೆ ಎಚ್ಚರಿಕೆ ನೀಡಿದೆ.
ಕೇಂದ್ರ ಸಚಿವ ವಿ. ಸೋಮಣ್ಣ ಅವರು ರಾಜ್ಯ ರಾಜಕೀಯಕ್ಕೆ ಮರಳುವ ಮುನ್ಸೂಚನೆ ನೀಡಿದ್ದು, ಕರ್ನಾಟಕದ ರಾಜಕೀಯ ವಲಯದಲ್ಲಿ ಹೊಸ ಚರ್ಚೆ ಮುನ್ನೆಲೆಗೆ ಬಂದಿದೆ.

ಮುಂಬೈ :

ಮುಂಬೈನ ನಾಲಸೋಪಾರಾದಲ್ಲಿ ಪ್ರಸಿದ್ಧ ಕಿರುತೆರೆ ನಟಿ ಸಂಚಿತಾ ಉಗಾಳೆ (22) ಅವರು ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಘಟನೆ ಚಿತ್ರರಂಗದಲ್ಲಿ ತೀವ್ರ ಆಘಾತ ಮೂಡಿಸಿದೆ. ಅವರ ನಿಗೂಢ ಸಾವಿನ ಹಿನ್ನೆಲೆಯಲ್ಲಿ ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದು, ಮಾನಸಿಕ ಆರೋಗ್ಯ ಸವಾಲುಗಳ ಕುರಿತು ಚಿತ್ರರಂಗದ ಅಸೋಸಿಯೇಷನ್ ಕಳವಳ ವ್ಯಕ್ತಪಡಿಸಿದೆ.
ಮತ್ತೊಂದು ಪ್ರಮುಖ ಬೆಳವಣಿಗೆಯಲ್ಲಿ, ಮುುಂಬೈ ನಗರದಲ್ಲಿ ರಿಯಲ್ ಎಸ್ಟೇಟ್ ಕ್ಷೇತ್ರವು ಭಾರಿ ಬೆಳವಣಿಗೆ ಕಾಣುತ್ತಿದ್ದು, 2026ರ ಮೊದಲ ತ್ರೈಮಾಸಿಕದಲ್ಲಿ ಬರೋಬ್ಬರಿ 70ಕ್ಕೂ ಹೆಚ್ಚು ದೊಡ್ಡ ಮರು-ಅಭಿವೃದ್ಧಿ (Redevelopment) ಒಪ್ಪಂದಗಳಿಗೆ ಸಹಿ ಹಾಕಲಾಗಿದೆ. ಮುಂಬೈ ಮಹಾನಗರ ಪಾಲಿಕೆಯು ಹಂದಿ ವ್ಯಾಪಾರಿಗಳು ಮತ್ತು ಬೀದಿ ಬದಿ ವ್ಯಾಪಾರಿಗಳ ನೋಂದಣಿ ಪ್ರಕ್ರಿಯೆಯ ಗಡುವನ್ನು ಜೂನ್ 26ರವರೆಗೆ ವಿಸ್ತರಿಸಿದೆ.
ಇದಲ್ಲದೆ, ಮುಂಬೈನಲ್ಲಿ ಭೂಗತ ಜಗತ್ತಿನ ಕರಾಳ ನೆರಳು ಮತ್ತೆ ಸಕ್ರಿಯವಾಗುತ್ತಿರುವ ಮುನ್ಸೂಚನೆ ಸಿಕ್ಕಿದ್ದು, ದಾವೂದ್ ಇಬ್ರಾಹಿಂನ ಡಿ-ಕಂಪನಿ ನೆಟ್‌ವರ್ಕ್ ಮುಂಬೈನಲ್ಲಿ ಸಕ್ರಿಯವಾಗಿದೆ ಎಂಬ ಆತಂಕಕಾರಿ ವರದಿಗಳು ಹೊರಬಿದ್ದಿವೆ. ಶೂಟರ್ ಮುನ್ನಾ ಜಿಂಗಾಡಾಗೆ ಸಂಬಂಧಿಸಿದಂತೆ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದಾರೆ. ಮುಂಬೈ-ಅಹಮದಾಬಾದ್ ಹೆದ್ದಾರಿಯಲ್ಲಿ ಇತ್ತೀಚೆಗೆ ನಡೆದ ಭೀಕರ ಅಪಘಾತದಲ್ಲಿ ಮದುವೆಗೆ ತೆರಳುತ್ತಿದ್ದ ವಾಹನಕ್ಕೆ ಕಂಟೈನರ್ ಲಾರಿ ಡಿಕ್ಕಿ ಹೊಡೆದ ಪರಿಣಾಮ 11 ಜನರು ಸಾವನ್ನಪ್ಪಿದ ದುರಂತ ಘಟನೆಯ ತನಿಖೆ ಮುಂದುವರಿದಿದೆ. ರೈಲ್ವೆ ವಲಯದಲ್ಲಿ ಕರ್ನಾಟಕ ಮತ್ತು ಮುಂಬೈ ಸಂಪರ್ಕಿಸುವ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ರೈಲುಗಳ ವೇಳಾಪಟ್ಟಿಯಲ್ಲಿ ಜೂನ್ 19ರವರೆಗೆ ಕೆಲವು ತಾತ್ಕಾಲಿಕ ಬದಲಾವಣೆಗಳನ್ನು ಮಾಡಲಾಗಿದೆ.

ಉಡುಪಿ :

ಉಡುಪಿಯ ಪ್ರಸಿದ್ಧ ದೇವಸ್ಥಾನವೊಂದರ ತಾತ್ಕಾಲಿಕ ಉಸ್ತುವಾರಿ ವಹಿಸಿಕೊಂಡಿದ್ದ ವ್ಯಕ್ತಿಯೊಬ್ಬರು ದಿಢೀರ್ ನಾಪತ್ತೆಯಾಗಿದ್ದು, ಈ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಭಾಗದಲ್ಲಿ ಮುಂಗಾರು . ಹವಾಮಾನ ಇಲಾಖೆಯು ಇಂದೂ ಕೂಡ ಉಡುಪಿ ಸೇರಿದಂತೆ ಕರಾವಳಿ ಜಿಲ್ಲೆಗಳಿಗೆ ಗುಡುಗು, ಮಿಂಚು ಹಾಗೂ ಬಿರುಗಾಳಿ ಸಹಿತ ಭಾರಿ ಮಳೆಯ ಮುನ್ಸೂಚನೆ ನೀಡಿ ಎಚ್ಚರಿಕೆ ಪ್ರಕಟಿಸಿದೆ. ಶೈಕ್ಷಣಿಕ ವಲಯದಲ್ಲಿ, ಮಾಹೆ (MAHE) ಆರೋಗ್ಯ ವಿಜ್ಞಾನ ವಿಭಾಗದ ನೂತನ ಸಹ ಕುಲಪತಿಯಾಗಿ ಮೇಜರ್ ಜನರಲ್ ಮ್ಯಾಥ್ಯೂಸ್ ಜೇಕಬ್ ಅವರು ಅಧಿಕಾರ ವಹಿಸಿಕೊಂಡಿದ್ದಾರೆ. ಕಾರ್ಕಳದ ಪಶ್ಚಿಮಘಟ್ಟದ ದಟ್ಟ ಅರಣ್ಯ ಪ್ರದೇಶದಲ್ಲಿ ಪರಿಸರ ಸಂಶೋಧಕರು ಜಂಟಿ ಕಾರ್ಯಾಚರಣೆ ನಡೆಸಿದ್ದು, ಅಪರೂಪದ ‘ಮಲಬಾರ್ ಟ್ರೀ ಟೋಡ್’ ಸೇರಿದಂತೆ ಒಟ್ಟು 11 ವಿಭಿನ್ನ ಪ್ರಬೇಧದ ಕಪ್ಪೆಗಳನ್ನು ಪತ್ತೆಹಚ್ಚಿ ಹೊಸ ಸಂಶೋಧನೆ ಮಾಡಿದ್ದಾರೆ. ಕ್ರೈಮ್ ಮತ್ತು ಅಪಘಾತ ವಿಭಾಗದಲ್ಲಿ, ಸಿದ್ದಾಪುರ ಮುಖ್ಯ ರಸ್ತೆಯಲ್ಲಿ ಕಾರು ಮತ್ತು ಬೈಕ್ ನಡುವೆ ಸಂಭವಿಸಿದ ಭೀಕರ ಡಿಕ್ಕಿಯಲ್ಲಿ ಬೈಕ್ ಸವಾರನಿಗೆ ಗಂಭೀರ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಉಡುಪಿಯ ಬನ್ನಂಜೆ ಸರ್ಕಾರಿ ಬಸ್ ನಿಲ್ದಾಣದಲ್ಲಿ ಹೆತ್ತವರ ಕಣ್ಣು ತಪ್ಪಿಸಿ ಚಾಕು ಹಿಡಿದು ಸಾರ್ವಜನಿಕರಿಗೆ ಬೆದರಿಕೆ ಒಡ್ಡುತ್ತಾ ರಂಪಾಟ ಮಾಡುತ್ತಿದ್ದ ಮಾನಸಿಕ ಸ್ಥಿಮಿತ ಕಳೆದುಕೊಂಡ ಯುವತಿಯನ್ನು ಸ್ಥಳೀಯರು ಹಾಗೂ ಪೊಲೀಸರು ಸಕ್ಕತ್ ಹರಸಾಹಸ ಪಟ್ಟು ನಿಯಂತ್ರಿಸಿದ ಘಟನೆ ನಡೆದಿದೆ. ಕಾರ್ಕಳದಲ್ಲಿ ಆಕಸ್ಮಿಕವಾಗಿ ಆಳವಾದ ಬಾವಿಗೆ ಬಿದ್ದು ತೊಂದರೆಯಲ್ಲಿದ್ದ ಬೆಕ್ಕನ್ನು ರಕ್ಷಿಸಲು ಹೋಗಿ ತಾವೂ ಬಾವಿಯೊಳಗೆ ಸಿಲುಕಿಕೊಂಡಿದ್ದ ವ್ಯಕ್ತಿಯನ್ನು ಅಗ್ನಿಶಾಮಕ ದಳದ ಸಿಬ್ಬಂದಿ ಸಕಾಲದಲ್ಲಿ ಧಾವಿಸಿ ಸುರಕ್ಷಿತವಾಗಿ ರಕ್ಷಿಸಿದ್ದಾರೆ. ಇನ್ನು ಕಳೆದ ಕೆಲವು ದಿನಗಳ ಹಿಂದೆ ತಮಿಳುನಾಡು ಸಿಎಂ ಜೋಸೆಫ್ ವಿಜಯ್ ಅವರ ಕೊಲ್ಲೂರು ಭೇಟಿ ವೇಳೆ ಕರಾಳ ದಿನ ಆಚರಿಸಲು ಯತ್ನಿಸಿದ ಕರವೇ ಕಾರ್ಯಕರ್ತರನ್ನು ಮುಂಜಾಗ್ರತಾ ಕ್ರಮವಾಗಿ ಬಂಧಿಸಿ ಬಿಡುಗಡೆಗೊಳಿಸಲಾಗಿದ್ದು, ಜಿಲ್ಲಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಮುಂದುವರಿಸಲಾಗಿದೆ.

ದಕ್ಷಿಣ ಕನ್ನಡ :

ಶಿಕ್ಷಣ ಇಲಾಖೆಯ ಪ್ರಮುಖ ಆದೇಶವೊಂದರಲ್ಲಿ, ನಕಲಿ ದಾಖಲೆಗಳನ್ನು ಸಲ್ಲಿಸಿ ಸರ್ಕಾರದ ಅನುಮೋದನೆ ಪಡೆದುಕೊಂಡಿದ್ದ ಆರೋಪದ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಎರಡು ಪ್ರಮುಖ ‘ಎಕ್ಸೆಲ್ ಪಿಯು ಕಾಲೇಜು’ಗಳ ಮಾನ್ಯತೆಯನ್ನು ಪದವಿ ಪೂರ್ವ ಶಿಕ್ಷಣ ಇಲಾಖೆಯು ಅಧಿಕೃತವಾಗಿ ರದ್ದುಗೊಳಿಸಿ ಆದೇಶ ಹೊರಡಿಸಿದೆ. ಆರೋಗ್ಯ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಇತ್ತೀಚಿನ ಆರೋಗ್ಯ ಇಲಾಖೆಯ ವರದಿಯೊಂದು ಹೊರಬಿದ್ದಿದ್ದು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶೇಕಡಾ 80 ರಷ್ಟು ಹೆರಿಗೆಗಳು ಖಾಸಗಿ ಆಸ್ಪತ್ರೆಗಳಲ್ಲೇ ನಡೆಯುತ್ತಿವೆ ಎಂದು ತಿಳಿದುಬಂದಿದೆ. ಇದು ರಾಷ್ಟ್ರೀಯ ಸರಾಸರಿಗಿಂತ ದುಪ್ಪಟ್ಟಾಗಿದ್ದು, ಸರ್ಕಾರಿ ಆಸ್ಪತ್ರೆಗಳಲ್ಲಿ ಸ್ತ್ರೀರೋಗ ತಜ್ಞರ ಕೊರತೆ ಮತ್ತು ಮಂಗಳೂರಿನಲ್ಲಿ ಖಾಸಗಿ ವೈದ್ಯಕೀಯ ಕಾಲೇಜುಗಳು ಹೆಚ್ಚಾಗಿರುವುದೇ ಇದಕ್ಕೆ ಪ್ರಮುಖ ಕಾರಣ ಎನ್ನಲಾಗಿದೆ. ಬಂಟ್ವಾಳ ಮತ್ತು ಪುತ್ತೂರು ತಾಲೂಕುಗಳಲ್ಲಿ ಈ ಅವಲಂಬನೆ ಅತ್ಯಂತ ಹೆಚ್ಚಾಗಿದೆ. ಇನ್ನು ಕರಾವಳಿ ಭಾಗದ ರೈಲು ಪ್ರಯಾಣಿಕರ ಗಮನಕ್ಕೆ, ಕೊಂಕಣ ರೈಲ್ವೆ ವಲಯದಲ್ಲಿ ಮುಂಗಾರು ವೇಳಾಪಟ್ಟಿ ಜಾರಿಗೆ ಬಂದಿರುವುದರಿಂದ ಜೂನ್ 15 ರಿಂದ ಮಂಗಳೂರು ಮಾರ್ಗವಾಗಿ ಸಂಚರಿಸುವ ಮತ್ಸ್ಯಗಂಧ ಎಕ್ಸ್‌ಪ್ರೆಸ್ ಸೇರಿದಂತೆ ಹಲವಾರು ಪ್ರಮುಖ ರೈಲುಗಳ ಸಮಯ ಮತ್ತು ವೇಳಾಪಟ್ಟಿಯಲ್ಲಿ ಮಹತ್ವದ ಬದಲಾವಣೆಗಳನ್ನು ಮಾಡಲಾಗಿದೆ. ಮೂಲಸೌಕರ್ಯ ವಿಭಾಗದಲ್ಲಿ, ದಕ್ಷಿಣ ಕನ್ನಡ ಜಿಲ್ಲೆಯ ಒಟ್ಟು 14 ಪ್ರಮುಖ ರಸ್ತೆಗಳ ಅಭಿವೃದ್ಧಿ ಕಾಮಗಾರಿಗಳಿಗಾಗಿ ಕೇಂದ್ರ ಸರ್ಕಾರವು ಸಿಆರ್‌ಐಎಫ್ ಯೋಜನೆಯಡಿ 57 ಕೋಟಿ ರೂಪಾಯಿಗಳ ಭಾರಿ ಅನುದಾನವನ್ನು ಮಂಜೂರು ಮಾಡಿದೆ ಎಂದು ಸಂಸದ ಬ್ರಿಜೇಶ್ ಚೌಟ ತಿಳಿಸಿದ್ದಾರೆ. ಇದೇ ವೇಳೆ ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭಾರಿ ಮಳೆ, ಮಂಜು ಅಥವಾ ಕಡಿಮೆ ದೃಶ್ಯಾವಳಿ ಇರುವ ಸಂದರ್ಭದಲ್ಲೂ ವಿಮಾನಗಳು ಅತ್ಯಂತ ಸುರಕ್ಷಿತವಾಗಿ ರನ್‌ವೇಯಲ್ಲಿ ಇಳಿಯಲು ನೆರವಾಗುವ ಸುಧಾರಿತ ‘ಪಿಎಎಲ್ ಕ್ಯಾಟ್-ಐ’ ಲೈಟಿಂಗ್ ವ್ಯವಸ್ಥೆಯನ್ನು ಯಶಸ್ವಿಯಾಗಿ ಅಳವಡಿಸಿ ಕಾರ್ಯಾರಂಭ ಮಾಡಲಾಗಿದೆ. ಧರ್ಮಸ್ಥಳ ವಿವಾದಕ್ಕೆ ಸಂಬಂಧಿಸಿದಂತೆ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗಳು ಮುಂದುವರಿದಿದ್ದು, ಪ್ರಕರಣದ ನಿಷ್ಪಕ್ಷಪಾತ ತನಿಖೆಗಾಗಿ ಸಿಬಿಐ ತನಿಖೆಗೆ ಒಪ್ಪಿಸಬೇಕು ಎಂದು ಬಿಜೆಪಿ ಮುಖಂಡರು ಸರ್ಕಾರವನ್ನು ಒತ್ತಾಯಿಸಿದ್ದಾರೆ. ಇನ್ನುಳಿದಂತೆ ಬಂಟ್ವಾಳದ ಪ್ರಸಿದ್ಧ ವಿದ್ಯಾನಿಕೇತನ ವಿದ್ಯಾಸಂಸ್ಥೆಯಲ್ಲಿ ವಿದ್ಯಾರ್ಥಿಗಳ ಸಾಂಸ್ಕೃತಿಕ ಚಟುವಟಿಕೆಗಳಿಗೆ ಅನುಕೂಲವಾಗುವಂತೆ ನೂತನ ಸಭಾಂಗಣವನ್ನು ಉದ್ಘಾಟಿಸಲಾಗಿದೆ ಹಾಗೂ ಮಂಗಳೂರು ರಿಫೈನರಿ ಮತ್ತು ಪೆಟ್ರೋಕೆಮಿಕಲ್ಸ್ ಲಿಮಿಟೆಡ್ (ಎಂಆರ್‌ಪಿಎಲ್) ಆವರಣದಲ್ಲಿ ವಿಶ್ವ ಪರಿಸರ ದಿನದ ಅಂಗವಾಗಿ ಸಾರ್ವಜನಿಕರಿಗೆ ಸಸಿ ಹಾಗೂ ಸೆಣಬಿನ ಚೀಲಗಳನ್ನು ವಿತರಿಸುವ ಮೂಲಕ ಪರಿಸರ ಜಾಗೃತಿ ಮೂಡಿಸಲಾಗಿದೆ. ಜಿಲ್ಲೆಯ ಗ್ರಾಹಕರಿಗೆ ಅನುಕೂಲವಾಗುವಂತೆ ಅನ್ನಭಾಗ್ಯ ಯೋಜನೆಯಡಿ ಮೇ ಮತ್ತು ಜೂನ್ ತಿಂಗಳ ಪಡಿತರ ಧಾನ್ಯಗಳನ್ನು ಜೂನ್ ತಿಂಗಳಲ್ಲೇ ಒಟ್ಟಿಗೆ ವಿತರಿಸಲು ಆಹಾರ ಇಲಾಖೆಯು ಸೂಕ್ತ ನಿರ್ದೇಶನ ನೀಡಿದೆ.



Related posts

ಕೇರಳದಲ್ಲಿ ಮೆದುಳು ತಿನ್ನುವ ಅಮೀಬಾ ಆತಂಕ: ಆರೋಗ್ಯ ಇಲಾಖೆಯಿಂದ ಅಯ್ಯಪ್ಪ ಭಕ್ತರಿಗೆ ಮಾರ್ಗಸೂಚಿ ಬಿಡುಗಡೆ

Mumbai News Desk

ಮುಲ್ಕಿ ಹೊಸ ಆಂಗಣ ತಿಂಗಳ ಬೆಳಕು ಕಾರ್ಯಕ್ರಮ, ದೈವ ಪಾತ್ರಿ ಮಾನಂಪಾಡಿ ಯಾದವ ಪೂಜಾರಿಗೆ ಸನ್ಮಾನ.

Mumbai News Desk

ನವೀನ್ ಡಿ. ಪಡೀಲ್‌ಗೆ 2025ರ ರಂಗಚಾವಡಿ ಪ್ರಶಸ್ತಿ: ನ. 9ರಂದು ಸುರತ್ಕಲ್‌ನಲ್ಲಿ ‘ಬೆಳ್ಳಿಹಬ್ಬದ ಸಂಭ್ರಮ’ ಕಾರ್ಯಕ್ರಮ

Mumbai News Desk

ಜಾಗತಿಕ ಮತ್ತು ರಾಷ್ಟ್ರೀಯ ವಿದ್ಯಮಾನಗಳೊಂದಿಗೆ ಕರ್ನಾಟಕ, ಮುಂಬೈ ಹಾಗೂ ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯ ಇಂದಿನ (29/05)ಪ್ರಮುಖ ಅಪ್‌ಡೇಟ್‌ಗಳು

Mumbai News Desk

ನಾನಿಲ್ತಾರ್ ಅಭಿಮಾನಿ ಬಳಗ ಮುಂಬೈ. 16 ನೇ ವರ್ಷದ ವರಮಹಾಲಕ್ಷ್ಮಿ ಪೂಜಾಯ ಆಮಂತ್ರಣ ಪತ್ರಿಕೆ ಬಿಡುಗಡೆ,

Mumbai News Desk

ಸನಾತನ ಧರ್ಮ ಬಲಿಷ್ಠಗೊಳಿಸೋಣ: ಹರಿನಾರಾಯಣದಾಸ ಅಸ್ರಣ್ಣ

Mumbai News Desk