
ಮುಂಬಯಿ ಮಹಾನಗರದ ಹಿರಿಯ ಸಾಮಾಜಿಕ ಸಂಘಟನೆ ಮೊಗವೀರ ವ್ಯವಸ್ಥಾಪಕ ಮಂಡಳಿಯು 123ನೇ ಸಂಸ್ಥಾಪನಾ ದಿನಾಚರಣೆಯನ್ನು ಆಗಸ್ಟ್. 9, 2024, ರಂದು ಅಂಧೇರಿಯ ಮೊಗವೀರ ಭವನದಲ್ಲಿ ಆಚರಿಸಿಕೊಂಡಿತು.
ಅಂದಿನ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಂಡಳಿಯ ಮಾಜಿ ಉಪಾಧ್ಯಕ್ಷ ಬಪ್ಪನಾಡು ಶ್ರೀನಿವಾಸ ಸುವರ್ಣ ಅವರು ಆಗಮಿಸಿದ್ದರು.
ಈ ಸಂದರ್ಭದಲ್ಲಿ ಮೊಗವೀರ ವ್ಯವಸ್ಥಾಪಕ ಮಂಡಳಿಗೆ ಸುಧೀರ್ಗ ಕಾಲದ ಸೇವೆಗಾಗಿ ಅವರನ್ನು ಮಂಡಳಿಯ ಅಧ್ಯಕ್ಷ ಅರುಣ್ ಕುಮಾರ್, ಉಪಾಧ್ಯಕ್ಷರಾದ ಅರವಿಂದ್ ಕಾಂಚನ್, ಟ್ರಸ್ಟಿಗಳಾದ ದೇವರಾಜ್ ಬಂಗೇರ ಮತ್ತು ಹರೀಶ್ ಪತ್ರನ್, ಕಾರ್ಯದರ್ಶಿ ದಿಲೀಪ್ ಕುಮಾರ್ ಮುಲ್ಕಿ, ಕೋಶಾಧಿಕಾರಿ ಪ್ರತಾಪ್ ಕುಮಾರ್ ಕರ್ಕೆರ, ಮೊಗವೀರ ಮಾಸಿಕದ ಸಂಪಾದಕ ಅಶೋಕ್ ಸುವರ್ಣ ಅವರು ಪದಾಧಿಕಾರಿಗಳ, ಹಿತೇಷಿಗಳ ಸಮ್ಮುಖದಲ್ಲಿ ಶಾಲು, ಸ್ಮರಣಿಕೆ, ಸನ್ಮಾನ ಪತ್ರ ನೀಡಿ ಸನ್ಮಾನಿಸಿದರು.
ಸನ್ಮಾನ ಸ್ವೀಕರಿಸಿದ ಶ್ರೀನಿವಾಸ ಸುವರ್ಣ ಅವರು “ಸಂಸ್ಥೆಗೆ ದುಡಿದವರನ್ನು ಗುರುತಿಸಿ ಗೌರವ ಮಾಡುವ ಪರಂಪರೆ ಮೆಚ್ಚುವಂತಹದು.ಮಂಡಳಿಯಲ್ಲಿ ಜತೆ ಕಾರ್ಯದರ್ಶಿಯಾಗಿ, ಉಪಾಧ್ಯಕ್ಷನಾಗಿ, ಸಾಂಸ್ಕೃತಿಕ ಸಮಿತಿಯ ಕಾರ್ಯಧ್ಯಕ್ಷನಾಗಿ ಎಲ್ಲರ ಸಹಕಾರದಿಂದ ದುಡಿದಿದ್ದೇನೆ.ಯುವಕರು ಮಂಡಳಿಗೆ ಬರುವಂತ್ತಾಗಲು ಹೆಚ್ಚು ಕಾರ್ಯಕ್ರಮಗಳನ್ನು ಆಯೋಜಿಸ ಬೇಕು ಎಂದರು.

ಅರುಣ್ ಕುಮಾರ್ ಮತ್ತು ಪದಾಧಿಕಾರಿಗಳು ಶ್ರೀನಿವಾಸ ಸುವರ್ಣ ಅವರ ಸಮಾಜ ಸೇವೆಯನ್ನು ಪ್ರಶಂಸೆಗೈದರು.
ಸಮಾರಂಭದಲ್ಲಿ ಜೊತೆ ಕಾರ್ಯದರ್ಶಿಗಳಾದ ದಯಾವತಿ ಸುವರ್ಣ, ವಿಶ್ವನಾಥ್ ಪುತ್ರನ್ ಹಾಗೂ ಆಡಳಿತ ಮಂಡಳಿಯ ಸುರೇಶ್ ಶ್ರೀಯಾನ್, ಚಂದ್ರಶೇಖರ ಕರ್ಕೇರ, ಪ್ರಶಾಂತ್ ತಿಂಗಳಾಯ, ರವಿ ದಾಸ್ ಸಾಲಿಯನ್, ಗೋವಿಂದ ಪುತ್ರನ್, ಚಂದ್ರಶೇಖರ್ ಸಾಲಿಯನ್ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ರಾಜೇಶ್ವರಿ ಉಪ್ಪೂರು, ಕಾರ್ಯದರ್ಶಿ ಸುಮತಿ ತಿಂಗಳಾಯ, ರೂಪ ಪುತ್ರನ್, ನಿವೇದಿತ ಸಾಲಿಯನ್, ಮೋಹಿನಿ ಸುವರ್ಣ, ಹರಿಣಾಕ್ಷಿ ಪುತ್ರನ್, ಮೋಹಿತ ಕರ್ಕೇರ, ರೇಖಾ ಕಾಂಚನ್ ಚಂದ್ರವತಿ ಮೆಂಡನ್ ಮತ್ತಿತರರು ಉಪಸ್ಥಿತರಿದ್ದರು .

ಶ್ರೀನಿವಾಸ ಸುವರ್ಣ ಅವರ ಪರಿಚಯ :
ಮೊಗವೀರ ವ್ಯವಸ್ಥಾಪಕ ಮಂಡಳಿಯ ಸಮಾಜ ಸೇವಾ ವರ್ತುಲಕ್ಕೆ ಸ್ವಯಂ ಸ್ಪೂರ್ತಿಯಿಂದ 1995ರಲ್ಲಿ ಸೇರಿದ ಶ್ರೀನಿವಾಸ ಸುವರ್ಣ ಅವರು ಜೊತೆ ಕಾರ್ಯದರ್ಶಿಯಾಗಿ ಸೇವೆ ಪ್ರಾರಂಭಿಸಿದರು. 2016 ರಲ್ಲಿ ಉಪಾಧ್ಯಕ್ಷರಾಗಿ ಆಯ್ಕೆಯಾದ ಅವರು ಮಂಡಳಿಯ ಸಾಂಸ್ಕೃತಿಕ ಸಮಿತಿಯ ಕಾರ್ಯಧ್ಯಕ್ಷರಾಗಿ ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಕ್ರಿಯಾತ್ಮಕ ಚಾಲನೆ ನೀಡಿದರು.
ಉಡುಪಿ ಜಿಲ್ಲೆಯ ಹೆಜಮಾಡಿ ಕೋಡಿಯ ಬಪ್ಪನಾಡು ಗ್ರಾಮದ ಕೂಡುಕಟ್ಟಿಗೆ ಸೇರಿದ ಮೈರೆ ಮರಕಾಲ್ತಿ ಮನೆತನದಲ್ಲಿ ಚಂದು ಕೋಟ್ಯಾನ್ ಮತ್ತು ಯಮುನಾ ಸುವರ್ಣ ದಂಪತಿಗಳ ಪುತ್ರರಾದ ಅವರು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಅಲ್ಲೇ ಮುಗಿಸಿ ಮುಂಬಯಿ ಸೇರಿದರು. ಇಲ್ಲಿ ಅವರು ಭವನ್ಸ್ ಕಾಲೇಜ್ ಚೌಪಾಟಿ ಮತ್ತು ಜೈಹಿಂದ್ ಕಾಲೇಜ್ಗಳಲ್ಲಿ ಪದವಿಯನ್ನು ಪೂರ್ಣಗೊಳಿಸಿದರು. ಕಾನೂನು ಕ್ಷೇತ್ರ ಕಲಿಯಲು ಗವರ್ನಮೆಂಟ್ ಲಾ ಕಾಲೇಜ್ ನಲ್ಲಿ ಶಿಕ್ಷಣ ಮುಂದುವರೆಸಿದರು. ಮುಂಬೈಯ ಸೆಂಟ್ರಲ್ ಬ್ಯಾಂಕ್ನಲ್ಲಿ ಕ್ಲರ್ಕ್ ಹುದ್ದೆಯಿಂದ ಕಾಲಕಾಲಕ್ಕೆ ಭರ್ತಿ ಪಡೆದು ಪ್ರಬಂಧಕರಾಗಿ ನಿವೃತ್ತಿ ಹೊಂದಿದರು. ಮುಂಬೈಯಲ್ಲಿ ಕನ್ನಡ,ತುಳು ಚಿತ್ರಗಳನ್ನು ಇಲ್ಲಿನ ಥಿಯೇಟರ್ ಗಳಲ್ಲಿ ಪ್ರದರ್ಶನ ಮಾಡಿಸುವ ಇವರ ಕಾರ್ಯ ಅತ್ಯಂತ ಸಾಹಸಮಯವಾದದ್ದು. 11 ಭಾರತೀಯ ಭಾಷೆಗಳ ಒಟ್ಟು ವಿಶೇಷವಾಗಿ ಕನ್ನಡ ಚಿತ್ರಗಳು ಸೇರಿ 800 ಚಲನಚಿತ್ರ ಪ್ರದರ್ಶನ ಮಾಡಿಸಿ ಕನ್ನಡ ತುಳುವರಿಗೆ ಸಿನಿಮಾ ನೋಡುವ ಅವಕಾಶವನ್ನು ಕಲ್ಪಿಸಿಕೊಟ್ಟ ಏಕೈಕ ವ್ಯಕ್ತಿ ಸುವರ್ಣರು. ನಾಟಕಾಭಿನಯ, ನೃತ್ಯ, ಯಕ್ಷಗಾನ ಇವರ ಹವ್ಯಾಸದ ಕ್ಷೇತ್ರಗಳು. ಹೆಜಮಾಡಿ ಕೊಡಿ ವಿದ್ಯಾ ಪ್ರಸಾರ ಹಳೆ ವಿದ್ಯಾರ್ಥಿ ಸಂಘದ ಸಕ್ರಿಯ ಕಾರ್ಯಕರ್ತರದ ಅವರು ಜೊತೆ ಕಾರ್ಯದರ್ಶಿಯಾಗಿ ಕೋಶಾಧಿಕಾರಿಯಾಗಿ, ಪ್ರಧಾನ ಕಾರ್ಯದರ್ಶಿಯಾಗಿ, ಉಪಾಧ್ಯಕ್ಷರಾಗಿ ನಂತರ ಅಧ್ಯಕ್ಷರಾಗಿ ಬಹುವಿಧದ ಕಾರ್ಯವನ್ನು ಸಂಘಕ್ಕೆ ನೀಡಿದ್ದಾರೆ. ಬಪ್ಪನಾಡು ಮೊಗವೀರ ಸಭಾ ಮುಂಬೈ ಶಾಖೆಯ 40 ವರ್ಷ ಪ್ರಧಾನ ಕಾರ್ಯದರ್ಶಿ ಹಾಗೂ ಈಗ ಅಧ್ಯಕ್ಷರಾಗಿದ್ದಾರೆ. ಸುವರ್ಣ ಮೂಲಸ್ಥಾನ ಕುಳಾಯಿ , ಕನ್ನಡ ಭವನ ಸೊಸೈಟಿ ಇವುಗಳ ಪದಾಧಿಕಾರಿಯಾಗಿ ಗಣನೀಯ ಕಾರ್ಯಗೈದಿದ್ದಾರೆ.
ಇವರ ಸಮಾಜ ಸೇವೆಯನ್ನು ಪರಿಗಣಿಸಿ ಅನೇಕ ಸಂಘ ಸಂಸ್ಥೆಗಳು ಇವರನ್ನು ಸನ್ಮಾನಿಸಿವೆ. ದುಬೈಯಲ್ಲಿ ಜರಗಿದ ಐತಿಹಾಸಿಕ ತುಳು ಸಮ್ಮೇಳನದಲ್ಲಿ ಇವರನ್ನು ಸನ್ಮಾನಿಸಲಾಗಿದೆ. ಮೊಗವೀರ್ಸ್ ಯು. ಎ. ಇ ಶ್ರೀನಿವಾಸ ಸುವರ್ಣ ಅವರ ಗಣನೀಯ ಸೇವೆಯನ್ನು ಗುರುತಿಸಿ ಸನ್ಮಾನಿಸಿದೆ.
ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ, ಕಲಾ ಕ್ಷೇತ್ರದಲ್ಲಿ ಸದ್ದು – ಗದ್ದಲವಿಲ್ಲದೆ ವಿವಿಧ ಸಂಘಟನೆಗಳಲ್ಲಿ ಸೇವೆ ಮಾಡಿದ ಶ್ರೀನಿವಾಸ ಸುವರ್ಣ ಅವರಿಗೆ ಶ್ರೀ ಲಕ್ಷ್ಮೀನಾರಾಯಣ ದೇವರು ಆಯುಷ್ಯ, ಆರೋಗ್ಯ, ಸಂತಸ ನೀಡಿ ಕಾಪಾಡಲಿ.




