ಮಾರಿಷಸ್: ವಿಶ್ವ ಧಾರ್ಮಿಕ ನಾಯಕರ ಸಮಾವೇಶದಲ್ಲಿ ಭಾಗವಹಿಸಲು ಮಾರಿಷಸ್ ಗೆ ಅಗಮಿಸಿರುವ ಶ್ರೀ ಪುತ್ತಿಗೆ ಶ್ರೀಗಳನ್ನು ಮಾರಿಷಸ್ ದೇಶದ ರಾಷ್ಟ್ರಪತಿಗಳಾದ ಶ್ರೀ ಧರಮ್ ಬೀರ್ ಗೋಕುಲ್ ಅವರು ರಾಷ್ಟ್ರಪತಿ ಭವನಕ್ಕೆ ಸ್ವಾಗತಿಸಿ ಸುಮಾರು ನಲವತ್ತು ನಿಮಿಷಗಳ ಕಾಲ ಪ್ರಸ್ತುತ ವಿದ್ಯಮಾನಗಳ ಕುರಿತು ಮಾತುಕತೆ ನಡೆಸಿದರು. ಪೂಜ್ಯ ಶ್ರೀಗಳ ಧಾರ್ಮಿಕ, ಆಧ್ಯಾತ್ಮಿಕ ಮತ್ತು ಸಾಮಾಜಿಕ ಭಾಗಿತ್ವದಿಂದ ಪ್ರಭಾವಿತರಾದ ರಾಷ್ಟ್ರಪತಿಯವರು ಉಡುಪಿ ಶ್ರೀಕೃಷ್ಣನ ಸ್ಥಾಪನೆಯ ಹಿನ್ನೆಲೆಯ ಮಧ್ವ ಸಿದ್ಧಾಂತದ ತಿರುಳನ್ನು ಶ್ರಿಗಳಿಂದ ತಿಳಿದುಕೊಂಡರು. ವಿಶ್ವದಾದ್ಯಂತ ಅಂತರ್ಮತೀಯ ಶಾಂತಿ ಸೌಹಾರ್ದತೆಗಾಗಿ ವಿಶ್ವ ಧಾರ್ಮಿಕ ನಾಯಕರ ಜೊತೆ ಶ್ರೀ ಪುತ್ತಿಗೆ ಶ್ರೀಗಳು ಕೈಜೋಡಿಸಿರುವುದನ್ನು ಶ್ಲಾಘಿಸಿದ ಮಾರಿಷಸ್ ರಾಷ್ಟ್ರಾಧ್ಯಕ್ಷರು ಮಾರಿಷಸ್ ನ ಪ್ರಜೆಗಳಿಗೆ ಮಾರ್ಗದರ್ಶನ ನೀಡುವಂತೆ ಕೋರಿದರು. ಶ್ರೀಗಳಿಂದ ಅನುಗ್ರಹ ಪಡೆದ ಅವರು ಕೋಟಿ ಗೀತಾ ಲೇಖನ ಯಜ್ಞದಲ್ಲಿ ಭಾಗಿಯಾಗಲು ಭಗವದ್ಗೀತೆಯ ಪುಸ್ತಕವನ್ನು ಸ್ವೀಕರಿಸಿದರು. ಭಾರತಕ್ಕೆ ಬಂದಾಗ ಉಡುಪಿಗೆ ಭೇಟಿ ನೀಡುವಂತೆ ಪೂಜ್ಯ ಶ್ರೀಗಳು ಅವರನ್ನು ಆಹ್ವಾನಿಸಿದರು.




