
ಮುಂಬಯಿ, ಸೆ.9 : ಅಖಿಲ ಗಾಂವ್ದೇವಿ ಕನ್ನಡ ಮಿತ್ರ ಮಂಡಳಿಯ ಆಶ್ರಯದಲ್ಲಿ 94 ನೇ ವರ್ಷದ ಗಣೇಶೋತ್ಸವದ ಪ್ರಯುಕ್ತ ಹಲವಾರು ಧಾರ್ಮಿಕ ಕಾರ್ಯಕ್ರಮಗಳು ಸೆ.7 ರಂದು ನಾನಾಚೌಕ್ ಸಮೀಪದಲ್ಲಿರುವ ಗಾಂವ್ದೇವಿಯ ಜೆ. ಕೆ. ಟವರ್ ಸನಿಹದಲ್ಲಿ ಬಲು ಸಡಗರದಿಂದ ಜರಗಿತು. ಅಂದು ಬೆಳಿಗ್ಗೆ ಭವ್ಯವಾದ ಮೆರವಣಿಗೆಯಲ್ಲಿ ಶ್ರೀ ವಿಘ್ನೇಶ್ವರನ ಆಗಮನದ ನಂತರ ಪ್ರತಿಷ್ಠಾಪನೆ ಸೇರಿದಂತೆ ಹಲವಾರು ಧಾರ್ಮಿಕ ವಿಧಿ ವಿಧಾನಗಳು ನೆರವೇರಿದವು.

ಸಾಂಪ್ರದಾಯಕವಾಗಿ ನಡೆದುಕೊಂಡು ಬಂದಂತೆ ಅಂದು ಸಂಜೆ ಗ್ರಾಮದೇವಿಯ ಸನ್ನಿಧಾನದಲ್ಲಿ ಪೂಜೆ ನೆಡೆದ ಬಳಿಕ ಭವ್ಯ ರಂಗ ಮಂಟಪದಲ್ಲಿ ರಾರಾಜಿಸುತ್ತಿರುವ ಸರ್ವಾಲಂಕೃತನಾದ ಶ್ರೀ ವಿಘ್ನೇಶ್ವರನಿಗೆ ಮಹಾಪೂಜೆ ನೆರವೇರಿತು
ಅಖಿಲ ಗಾಂವ್ದೇವಿ ಕನ್ನಡ ಮಿತ್ರ ಮಂಡಳಿಯ ಅಧ್ಯಕ್ಷರಾದ ಮಹಾದೇವ ಪೂಜಾರಿ ಯವರ ನೇತೃತ್ವದಲ್ಲಿ ಯಕ್ಷ ಪ್ರಿಯ ಬಳಗದವರ ಹಿಮ್ಮೇಳದ ಚಂಡೆ ಮದ್ದಳೆಯ ನಿನಾದದೊಂದಿಗೆ ವೇದಮೂರ್ತಿ ನವೀನ್ ಭಟ್ ಪೂಜಾ ಕೈಂಕರ್ಯವನ್ನು ನೆರವೇರಿಸಿದರು ಬಳಿಕ ನೆರೆದ ಭಕ್ತಾಧಿಗಳಿಗೆ ತೀರ್ಥ ಪ್ರಸಾದ ವಿತರಿಸಲಾಯಿತು.

ಪ್ರತಿವರ್ಷ ನಮ್ಮಲ್ಲಿ ಗೆಜ್ಜೆ ಸೇವೆಯ ಅಂಗವಾಗಿ ಸಂಪೂರ್ಣ ರಾತ್ರಿ ಯಕ್ಷಗಾನ ನೆಡೆಯುತ್ತಿತ್ತು ಆದರೆ ಸ್ಥಳಾವಕಾಶದ ಕೊರತೆಯಿಂದ ಕಳೆದೆರಡು ವರ್ಷ ಯಕ್ಷಗಾನದ ನೃತ್ಯ ರೂಪಕವನ್ನು ಆಯೋಜಿಸಿದ್ದೇವೆ ಆದರೆ ವಿಶಾಲವಾದ ಸ್ಥಳಾವಕಾಶದ ಕೊರತೆ ಇರುವುದರಿಂದ ಈ ವರ್ಷ ಅದು ಕೂಡ ಸಾಧ್ಯವಾಗಲಿಲ್ಲ ಸ್ಥಳಾವಕಾಶದ ಸಮಸ್ಯೆ ಬಗೆಹರಿದರೆ ಮುಂಬರುವ ದಿನಗಳಲ್ಲಿ ಮತ್ತೆ ಪುನ ಹಿಂದಿನಂತೆ ಯಕ್ಷಗಾನವನ್ನು ಆಯೋಜಿಸಲಿದ್ದೇವೆ ಎಂದು ಅಖಿಲ ಗಾಂವ್ದೇವಿ ಕನ್ನಡ ಮಿತ್ರ ಮಂಡಳಿಯ ಅಧ್ಯಕ್ಷರಾದ ಮಹಾದೇವ ಪೂಜಾರಿ ತಿಳಿಸಿದರು.
ಸಾವಿತ್ರಿ ಎಮ್. ಪೂಜಾರಿ, ಲಲಿತಾ ಎಸ್. ದೇವಾಡಿಗ, ಆನಂದ ಪೂಜಾರಿ ಕೊಡೇರಿ, ಸುಧಾಕರ ಪೂಜಾರಿ, ಜನಾರ್ದನ ನಾಯ್ಕನಕಟ್ಟೆ, ಮಹೇಶ ಪೂಜಾರಿ, ಸಜಿತ್ ಮಾರಣಕಟ್ಟೆ, ಅಣ್ಣಪ್ಪ ಚೆರುಮಕ್ಕಿ, ಜ್ಯೋತಿ ಕೆ. ಪೂಜಾರಿ, ಗ್ರೀಷ್ಮಾ ಎಮ್. ಪೂಜಾರಿ ಹಾಗೂ ಮತ್ತಿತರರು ಪೂಜಾ ಕೈಂಕರ್ಯದ ಪೂರ್ವ ತಯಾರಿಗೆ ನೆರವಾದರೆ ಮಿತ್ರ ಮಂಡಳಿಯ ಸದಸ್ಯರು ಹಾಗೂ ಭಕ್ತರು ತೀರ್ಥ ಪ್ರಸಾದ ಸ್ವೀಕರಿಸಿ ಗಜಾನನ ಕೃಪಾ ಕಟಾಕ್ಷಕ್ಕೆ ಪಾತ್ರರಾದರು.




