May 18, 2026
Mumbai News Kannada
ಸುದ್ದಿ

ಬೆಂಗಳೂರು – ಮುಂಬೈ ನಡುವೆ ಹೊಸ ಎಕ್ಸ್‌ಪ್ರೆಸ್ ರೈಲು ಸಂಚಾರ ಆರಂಭ: ಶೀಘ್ರದಲ್ಲೇ ವಂದೇ ಭಾರತ್ ಸ್ಲೀಪರ್ ಸೇವೆ





ಬೆಂಗಳೂರು ಮತ್ತು ಮುಂಬೈ ನಡುವೆ ಹೊಸ SMVT ಬೆಂಗಳೂರು – ಲೋಕಮಾನ್ಯ ತಿಲಕ್ ಟರ್ಮಿನಸ್ ಎಕ್ಸ್‌ಪ್ರೆಸ್ (ರೈಲು ಸಂಖ್ಯೆ 16553/54) ರೈಲಿಗೆ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಚಾಲನೆ ನೀಡಿದ್ದಾರೆ. ಇದರೊಂದಿಗೆ ಎರಡು ನಗರಗಳ ನಡುವೆ ಶೀಘ್ರದಲ್ಲೇ ಬಹುನಿರೀಕ್ಷಿತ ವಂದೇ ಭಾರತ್ ಸ್ಲೀಪರ್ ಸೇವೆ ಆರಂಭವಾಗಲಿದೆ ಎಂದು ಸಚಿವರು ಘೋಷಿಸಿದ್ದಾರೆ. ಪ್ರಸ್ತುತ ಕರ್ನಾಟಕದಲ್ಲಿ 12 ಜೋಡಿ ವಂದೇ ಭಾರತ್ ರೈಲುಗಳು ಸಂಚರಿಸುತ್ತಿದ್ದು, ಬೆಂಗಳೂರು-ಮಂಗಳೂರು ಮಾರ್ಗದಲ್ಲಿ ಪರೀಕ್ಷಾರ್ಥ ಸಂಚಾರ ನಡೆಯುತ್ತಿದೆ.
ರಾಜ್ಯದ ರೈಲ್ವೆ ಮೂಲಸೌಕರ್ಯಕ್ಕೆ ಸಂಬಂಧಿಸಿದಂತೆ ಅಮೃತ ಭಾರತ ನಿಲ್ದಾಣ ಯೋಜನೆಯಡಿ ಕರ್ನಾಟಕದ 61 ರೈಲ್ವೆ ನಿಲ್ದಾಣಗಳನ್ನು ₹2,160 ಕೋಟಿ ವೆಚ್ಚದಲ್ಲಿ ಪುನರಾಭಿವೃದ್ಧಿ ಮಾಡಲಾಗುತ್ತಿದ್ದು, ಈಗಾಗಲೇ 9 ನಿಲ್ದಾಣಗಳ ಕೆಲಸ ಪೂರ್ಣಗೊಂಡಿದೆ. ಇದರಲ್ಲಿ ಪ್ರಮುಖವಾಗಿ ಬೆಂಗಳೂರು ಕಂಟೋನ್ಮೆಂಟ್ ನಿಲ್ದಾಣವನ್ನು ₹485 ಕೋಟಿ ಹಾಗೂ ಯಶವಂತಪುರ ಜಂಕ್ಷನ್ ನಿಲ್ದಾಣವನ್ನು ₹367 ಕೋಟಿ ವೆಚ್ಚದಲ್ಲಿ ನವೀಕರಿಸಲಾಗುತ್ತಿದೆ. ಇನ್ನುಳಿದಂತೆ 2014 ರಿಂದ ರಾಜ್ಯದಲ್ಲಿ 1,750 ಕಿ.ಮೀ ಹೊಸ ರೈಲು ಮಾರ್ಗಗಳನ್ನು ನಿರ್ಮಿಸಲಾಗಿದ್ದು, ಹಾಸನ-ಮಂಗಳೂರು ವಿಭಾಗದ ವಿದ್ಯುದ್ದೀಕರಣ ಕಾರ್ಯ ಮುಗಿದು ಪರೀಕ್ಷಾರ್ಥ ಸಂಚಾರದಲ್ಲಿದೆ.
ಬೆಂಗಳೂರು ಉಪನಗರ ರೈಲ್ವೆ ಯೋಜನೆಯ ನಾಲ್ಕು ಕಾರಿಡಾರ್‌ಗಳಲ್ಲಿ ಕೆಲಸ ಪ್ರಗತಿಯಲ್ಲಿದೆ. ಬೈಯಪ್ಪನಹಳ್ಳಿ-ಚಿಕ್ಕಬಾಣಾವರ ಮತ್ತು ಹೀಲಲಿಗೆ-ರಾಜನುಕುಂಟೆ ಮಾರ್ಗಗಳಿಗೆ ಭೂಸ್ವಾಧೀನ ಮುಗಿದು ನಿಲ್ದಾಣ ನಿರ್ಮಾಣ ಕಾರ್ಯ ನಡೆಯುತ್ತಿದೆ. ಕೆಎಸ್‌ಆರ್ ಬೆಂಗಳೂರು-ದೇವನಹಳ್ಳಿ ಜೋಡಣೆಗೆ ಜಂಟಿ ಅನುಮೋದನೆ ಮತ್ತು ಭೂತಾಂತ್ರಿಕ ಸಮೀಕ್ಷೆ ಪೂರ್ಣಗೊಂಡಿದ್ದರೆ, ಕೆಂಗೇರಿ-ವೈಟ್‌ಫೀಲ್ಡ್ ಜೋಡಣೆಗೆ ಇತ್ತೀಚೆಗೆ ಅನುಮೋದನೆ ಸಿಕ್ಕಿದ್ದು ಶೀಘ್ರದಲ್ಲೇ ಸಮೀಕ್ಷೆ ಆರಂಭವಾಗಲಿದೆ.
ಭವಿಷ್ಯದ ಯೋಜನೆಗಳ ಭಾಗವಾಗಿ ಬೆಂಗಳೂರನ್ನು ಹೈದರಾಬಾದ್ ಮತ್ತು ಚೆನ್ನೈನಗರಗಳೊಂದಿಗೆ ಸಂಪರ್ಕಿಸುವ ಬುಲೆಟ್ ರೈಲು ಕಾರಿಡಾರ್‌ಗಳಿಗೆ ಅನುಮೋದನೆ ನೀಡಲಾಗಿದೆ. ಮುಂಬೈ ಮತ್ತು ಬೆಂಗಳೂರು ಸೇರಿದಂತೆ ಪ್ರಮುಖ ನಗರಗಳನ್ನು ಒಳಗೊಂಡ 7,000 ಕಿ.ಮೀ. ಹೈಸ್ಪೀಡ್ ರೈಲು ಜಾಲವನ್ನು ವಿಸ್ತರಿಸುವ ಗುರಿಯನ್ನು ರೈಲ್ವೆ ಇಲಾಖೆ ಹೊಂದಿದೆ. ಇದಲ್ಲದೆ, ರೈಲುಗಳ ನಿರ್ವಹಣೆಗಾಗಿ ಥಣಿಸಂದ್ರದಲ್ಲಿ ₹270 ಕೋಟಿ ವೆಚ್ಚದಲ್ಲಿ ವಂದೇ ಭಾರತ್ ಸ್ಲೀಪರ್ ಡಿಪೋ ಮತ್ತು SMVT ಬೆಂಗಳೂರಿನಲ್ಲಿ ₹52.73 ಕೋಟಿ ವೆಚ್ಚದಲ್ಲಿ ಚೇರ್ ಕಾರ್ ನಿರ್ವಹಣಾ ಸೌಲಭ್ಯವನ್ನು ಸ್ಥಾಪಿಸಲಾಗುತ್ತಿದೆ.



Related posts

ಸಾಕ್ಷಿ ಚಂದ್ರಹಾಸ ಬೆಳ್ಚಡ ಇವರಿಗೆ ಆಸ್ಟ್ರೇಲಿಯಾದಿಂದ ವಿಶಿಷ್ಟ ಸಾಧನೆಯೊಂದಿಗೆ ನಗರ ಯೋಜನೆ ಮತ್ತು ಪರಿಸರದಲ್ಲಿ ಸ್ನಾತಕೋತ್ತರ ಪದವಿ

Mumbai News Desk

ಶ್ರೀ ಭಗವಾನ್ ನಿತ್ಯಾನಂದ ಸ್ವಾಮಿ ಮಂದಿರ ಮಠ, ಉಡುಪಿ : ಜುಲೈ 10ಕ್ಕೆ ಗುರುಪೂರ್ಣಿಮಾ ಮಹೋತ್ಸವ.

Mumbai News Desk

ತಬಲ ಮಾಂತ್ರಿಕ ಜಾಕೀರ್ ಹುಸೇನ್ ನಿಧನ

Mumbai News Desk

ಕಾಪು ಶ್ರೀ ಹೊಸಮಾರಿಗುಡಿಯ ಜೀರ್ಣೋದ್ಧಾರಕ್ಕೆ ರಮೇಶ್ ಉಚ್ಚಿಲ ಮತ್ತು ಕುಟುಂಬಸ್ತರಿಂದ 75 ಶಿಲಾ ಸೇವೆ.

Mumbai News Desk

ತ್ರಿಶಿಕಾ ನರೇಂದ್ರ ಶೆಟ್ಟಿ ಸಿಎ ಪರೀಕ್ಷೆಯಲ್ಲಿ ಉತ್ತೀರ್ಣ

Mumbai News Desk

ಬಾಂಡೂಪ್: ಶೇಖರ್ ನಾಯ್ಕ್ ನಿಧನ

Mumbai News Desk